ನವದೆಹಲಿ : 1975ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಸಾಕಷ್ಟು ಅಪಖ್ಯಾತಿ ಪಡೆದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ, ಸಂವಿಧಾನದ ಯಾವ ಪರಿಚ್ಛೇದದ ಆಧಾರದಲ್ಲಿ ತುರ್ತುಸ್ಥಿತಿ ಹೇರಲಾಗುತ್ತದೆ? ಇಂಥ ಒಂದು ಅವಕಾಶ ಸಂವಿಧಾನದಲ್ಲಿದೆ ಎಂಬುದೇ ಗೊತ್ತಿರಲಿಲ್ಲವಂತೆ!
ಇಂಥ ಅನೇಕ ಕುತೂಹಲಕರ ಸಂಗತಿಗಳನ್ನು ಒಂದು ಕಾಲದ ಇಂದಿರಾ ಪರಮಾಪ್ತ, ಭಾರತದ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿರಚಿತ ನೂತನ ಆತ್ಮಾವಲೋಕನ ಪುಸ್ತಕ ಒಳಗೊಂಡಿದೆ. 'ದ ಡ್ರಮ್ಯಾಟಿಕ್ ಡೆಕೇಡ್' ಹೆಸರಿನ ಪುಸ್ತಕ ಗುರುವಾರ ಬಿಡುಗಡೆಯಾಗಲಿದ್ದು, ಅದರ ಕೆಲ ಸಂಗತಿಗಳು ಮಾಧ್ಯಮಗಳಿಗೆ ಮೊದಲೇ ಲಭಿಸಿವೆ.
'ಇಂದಿರಾ ಗಾಂಧಿ ಅವರಿಗೆ 1975ರಲ್ಲಿ ದೇಶವು ಅರಾಜಕತೆಯತ್ತ ಸಾಗುತ್ತಿದೆ ಎಂಬ ಭಾವನೆ ಬಂದಿತ್ತು. ಲೋಕನಾಯಕ ಜಯಪ್ರಕಾಶ ನಾರಾಯಣರು ಪರ್ಯಾಯ ಸರ್ಕಾರವನ್ನು ದೇಶದಲ್ಲಿ ನಡೆಸಲು ಹೊರಟಿದ್ದಾರೆ. ಅವರು ಸೇನೆಗೆ ಮತ್ತು ಪೊಲೀಸರಿಗೆ ಸರ್ಕಾರದ ಆದೇಶ ಪಾಲಿಸಬಾರದು ಎಂದು ಸೂಚಿಸಿದ್ದಾರೆ ಎಂಬುದು ಇಂದಿರಾ ಅವರಲ್ಲಿ ಆಕ್ರೋಶ ಮನೆಮಾಡಲು ಕಾರಣವಾಗಿತ್ತು' ಎಂದು ಪುಸ್ತಕದಲ್ಲಿ 'ಮಿಡ್ನೈಟ್ ಡ್ರಾಮಾ' ಎಂಬ ಅಧ್ಯಾಯದಲ್ಲಿ ಪ್ರಣಬ್ ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿದ್ದ ತಮ್ಮ ಪರಮಾಪ್ತ ಸಿದ್ದಾರ್ಥ ಶಂಕರ್ ರೇ ಅವರನ್ನು 1975ರ ಜೂನ್ 25ರ ಬೆಳಗ್ಗೆ ಇಂದಿರಾ ಅವರು ದಿಲ್ಲಿಗೆ ಕರೆಸಿಕೊಂಡರು. ದೇಶ ಅರಾಜಕತೆಯತ್ತ ಸಾಗುತ್ತಿರುವ ಮತ್ತು ಜೆ.ಪಿ. ಅವರ ನಡೆಗಳ ಬಗ್ಗೆ ರೇ ಎದುರು ಇಂದಿರಾ ಆತಂಕ ವ್ಯಕ್ತಪಡಿಸಿದರು. ಆಗ ರೇ ಅವರು, 'ನನಗೆ ಕಾಲಾವಕಾಶ ಕೊಡಿ. ಇದಕ್ಕೆ ಪರಿಹಾರ ಏನು ಎಂಬುದನ್ನು ಸಂಜೆ 5 ಗಂಟೆಗೆ ವಾಪಸು ಬಂದಾಗ ಹೇಳುತ್ತೇನೆ' ಎಂದರು. ಸಂಜೆ ರೇ ಅವರು ಇಂದಿರಾ ಮನೆಗೆ ಮರಳಿ 'ಸಂವಿಧಾನದ 352ನೇ ಪರಿಚ್ಛೇದದ ಪ್ರಕಾರ ತುರ್ತು ಪರಿಸ್ಥಿತಿ ಹೇರಲು ಅವಕಾಶವಿದೆ' ಎಂದರು.
ಆಗ ಇಂದಿರಾ ಅವರು 'ಹೌದಾ? ಇಂಥದ್ದೊಂದು ಅವಕಾಶ ಸಂವಿಧಾನದಲ್ಲಿದೆ ಎಂಬುದು ನನಗೆ ಗೊತ್ತೇ ಇರಲಿಲ್ಲ' ಎಂದು ಉದ್ಗರಿಸಿದರು ಎಂದು ಪ್ರಣಬ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಬಳಿಕ ಮಧ್ಯರಾತ್ರಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅವರ ಬಳಿ ರೇ ಅವರನ್ನು ಕರೆದುಕೊಂಡೇ ತೆರಳಿದ ಇಂದಿರಾ, ತುರ್ತುಪರಿಸ್ಥಿತಿಗೆ ಸಂಪುಟದ ಸಲಹೆಯನ್ನು ಕೂಡ ಪಡೆಯದೇ ಶಿಫಾರಸು ಮಾಡಿದರು. ಇದಕ್ಕೆ ಅಲಿ ಅಂಕಿತ ಹಾಕಿದರು ಎಂದು 'ಮಿಡ್ನೈಟ್ ಡ್ರಾಮಾ' ಅಧ್ಯಾಯ ವಿವರಿಸುತ್ತದೆ.
- ಇಂದಿರಾಗೆ ತುರ್ತುಸ್ಥಿತಿ ಐಡಿಯಾ ಕೊಟ್ಟಿದ್ದು ಅವರ ಪರಮಾಪ್ತ ಸಿದ್ದಾರ್ಥ ಶಂಕರ್ ರೇ
- ಸಂವಿಧಾನದ 352ನೇ ಕಲಮಿನ ಬಗ್ಗೆ ಇಂದಿರಾಗೆ ತಿಳಿವಳಿಕೆ ಇರಲಿಲ್ಲ
- ಪ್ರಣಬ್ ನೂತನ ಪುಸ್ತಕದಲ್ಲಿ ಅಚ್ಚರಿಯ ಉಲ್ಲೇಖ
- ರಾಷ್ಟ್ರಪತಿ ವಿರಚಿತ 'ದ ಡ್ರಮ್ಯಾಟಿಕ್ ಡೆಕೇಡ್' ಬಿಡುಗಡೆ ಇಂದು