ಬೆಂಗಳೂರು : 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದ ಕಾಂಗ್ರೆಸ್ ಪಕ್ಷ ಈಗಲೂ ಅದರ ಪರಿಣಾಮಗಳನ್ನು ಅನುಭವಿಸುತ್ತಿದೆ ಎಂದು ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಆರ್ಎಸ್ಎಸ್ ಕಚೇರಿ ಕೇಶವಶಿಲ್ಪದಲ್ಲಿ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಒಂದು ಕರಾಳ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾತಂತ್ರವನ್ನು ಧಮನ ಮಾಡಲು ಕಾಂಗ್ರೆಸ್ ಪಕ್ಷ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿತ್ತು. ಆನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ನಾಮಾವಶೇಷವಾಯಿತು. ಅದೇ ಪರಿಸ್ಥಿತಿ ಈಗಲೂ ಮುಂದುವರೆದಿದೆ. ತುರ್ತು ಪರಿಸ್ಥಿತಿಯ ಪರಿಣಾಮಗಳು ಕಾಂಗ್ರೆಸ್ನ ಮೇಲೆ ಎಂದಿಗೂ ಇರುತ್ತದೆ ಎಂದರು.
ತಮ್ಮ ಅಸ್ತಿತ್ವಕ್ಕೆ ಧಕ್ಕೆ ಒದಗುತ್ತದೆ ಎಂಬುದು ಅರಿವಾಗುತ್ತಲೇ ಇಂದಿರಾ ಗಾಂಧಿ, ಸಂವಿಧಾನಕ್ಕೆ ವಿರುದ್ಧವಾಗಿ ತುರ್ತಪರಿಸ್ಥಿತಿ ಹೇರಿದರು. ಆರೆಸ್ಸೆಸ್ ಹಾಗೂ ಜನಸಂಘದ ಕಾರ್ಯಕರ್ತರು ಹಾಗೂ ನಾಯಕರು ಮುಂಚೂಣಿಯಲ್ಲಿ ನಿಂತು ಇದನ್ನು ವಿರೋಧಿಸಿದರು. ಸಮಾಜವಾದಿಗಳು ಸೇರಿ ಇತರೆ ಪಕ್ಷಗಳ ಕಾರ್ಯಕರ್ತರೂ ಕೈಜೋಡಿಸಿದರು ಎಂದು ಜೋಶಿ ನೆನಪು ಮಾಡಿಕೊಂಡರು.
ಅಧಿಕಾರಕ್ಕಾಗಿ ಸಂವಿಧಾನ, ನ್ಯಾಯಾಂಗ, ಪತ್ರಿಕಾ ಸ್ವಾತಂತ್ರ್ಯ ಯಾವುದನ್ನೂ ಲೆಕ್ಕಿಸದಂತಹ ಮನಸ್ಥಿತಿ ಇಂದಿರಾ ಗಾಂಧಿಯವರದ್ದಾಗಿತ್ತು ಎಂದು ವಾಗ್ದಾಳಿ ನಡೆಸಿದರು.