ರಾಮ್ಗಡ : ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉಗ್ರರ ಚಟುವಟಿಕೆಗಳು ಹೆಚ್ಚಾಗತೊಡಗಿವೆ ಎಂಬ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಜಾರ್ಖಂಡ್ನ ರಾಮ್ಗಡದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಾವು ಕಳೆದ 10 ವರ್ಷಗಳ ಕಾಲ ಆಡಳಿತ ನಡೆಸಿದ್ದೇವೆ. ಆಗ ಜಮ್ಮು-ಕಾಶ್ಮೀರ ಒಳ್ಳೆಯ ಪ್ರವಾಸಿ ತಾಣವಾಗಿತ್ತು. ಜನರು ಬಂದು ಹೋಗುತ್ತಿದ್ದರು. ಅಲ್ಲಿ ಶಾಂತಿ ನೆಲೆಸಿತ್ತು. ಆದರೆ ಯಾವಾಗ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಏರಿತೋ, ಉಗ್ರ ಚಟುವಟಿಕೆಗಳು ಆರಂಭವಾಗತೊಡಗಿದವು ಎಂದು ಹೇಳಿದ್ದಾರೆ.
ಚುನಾವಣೆ ಪ್ರಚಾರಕ್ಕೆಂದು ಪ್ರಧಾನಿ ಮೋದಿ ಎಲ್ಲೇ ಹೋಗಲಿ, ಅದು ಮಹಾರಾಷ್ಟ್ರವಾಗಿರಲಿ, ದೆಹಲಿ ಅಥವಾ ಉತ್ತರ ಪ್ರದೇಶವಾಗಿರಲಿ, ಅಲ್ಲಿ ಹಿಂಸಾಚಾರ ನಡೆದೇ ನಡೆಯುತ್ತದೆ. ಒಂದು ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಮೋದಿ ಎತ್ತಿಕಟ್ಟುತ್ತಾರೆ. ಅದಾದ ಬಳಿಕ ಚುನಾವಣೆ ನಡೆಯುತ್ತದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ವಿವಾದ ಸೃಷ್ಟಿಸಿದ್ದಾರೆ.