ಚಂಡೀಗಢ : ಹರಿಯಾಣ ಸರ್ಕಾರ ಪದೇ ಪದೆ ತಮ್ಮನ್ನು ವರ್ಗಾವಣೆ ಮಾಡುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ, ಈ ವರ್ಗಾವಣೆಯಿಂದ ನಿಜಕ್ಕೂ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.
ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಮತ್ತು ಸುಧಾರಣೆ ತರಲು ಸಾಕಷ್ಟು ಶ್ರಮಿಸಿದ್ದೆ. ಆದರೆ ಈಗ ಅಲ್ಲಿಂದಲೂ ವರ್ಗಾವಣೆ ಮಾಡಿರುವುದರಿಂದ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಭೂ ಅವ್ಯವಹಾರವನ್ನು ಬಯಲಿಗೆಳೆದಿದ್ದ ದಕ್ಷ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರನ್ನು ಏ.1ರ ರಾತ್ರಿ ಹರ್ಯಾಣದ ಬಿಜೆಪಿ ಸರ್ಕಾರ ವರ್ಗಾವಣೆ ಮಾಡಿತ್ತು.
ಖೇಮ್ಕಾ 24 ವರ್ಷದ ಸೇವೆಯಲ್ಲಿ 45 ಬಾರಿ ವರ್ಗವಾಗಿದ್ದಾರೆ.
ಕಳೆದ ನವೆಂಬರ್ ನಲ್ಲಿ ಸಾರಿಗೆ ಆಯುಕ್ತ ಮತ್ತು ಕಾರ್ಯದರ್ಶಿಯನ್ನಾಗಿ ಖೇಮ್ಕಾ ಅವರನ್ನು ಹರ್ಯಾಣ ಸರ್ಕಾರ ನೇಮಕ ಮಾಡಿತ್ತು. ಈಗ ವಸ್ತು ಸಂಗ್ರಹಾಲಯ ಮತ್ತು ಪುರಾರತ್ವ ಇಲಾಖೆಗೆ ವರ್ಗಾವಣೆ ಮಾಡಿದೆ. ಇದೇ ವೇಳೆ ಇತರ 8 ಐಎಎಸ್ ಅಧಿಕಾರಿಗಳನ್ನು ಹರ್ಯಾಣ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಖೇಮ್ಕಾ ಅವರನ್ನು ಹಲವು ಬಾರಿ ವರ್ಗಾವಣೆ ಮಾಡಿತ್ತು. ಆಗ ವಿಪಕ್ಷದಲ್ಲಿದ್ದ ಬಿಜೆಪಿ ವರ್ಗಾವಣೆಯನ್ನು ಟೀಕಿಸಿತ್ತು. ಇದೀಗ ಅಧಿಕಾರಕ್ಕೆ ಬಂದ ಮೇಲೂ ಬಿಜೆಪಿ ಅದೇ ಕೆಲಸ ಮಾಡಿರುವುದು ವಿಪರ್ಯಾಸ.