ಇಸ್ಲಾಮಾಬಾದ್ : ಪಾಕಿಸ್ತಾನ-ಭಾರತ ನಡುವಿನ ಮಾತುಕತೆ ನಡೆದಾಗಲೆಲ್ಲಾ ನಾವು ಕಾಶ್ಮೀರದ ನಾಯಕರ ಜತೆ ಮಾಕುಕತೆ ನಡೆಸುತ್ತಾ ಬಂದಿದ್ದೇವೆ. ಕಾಶ್ಮೀರ ಸಮಸ್ಯೆಯ ಬಗ್ಗೆ ಅಲ್ಲಿನ ನಾಯಕರ ಅಭಿಪ್ರಾಯಗಳನ್ನು ಕೇಳುವುದರಲ್ಲಿ ಹೊಸತೇನೂ ಇಲ್ಲ ಎಂದು ಪಾಕ್ ಪ್ರಧಾನಿ ನವಾಜ್ ಶರೀಫ್ ತಿಳಿಸಿದ್ದಾರೆ.
18ನೇ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಿ ಮರಳುತ್ತಿದ್ದ ವೇಳೆ ಮಾತನಾಡಿದ ಅವರು, ನವದೆಹಲಿಯಲ್ಲಿ ಪಾಕಿಸ್ತಾನ್ ಹೈ ಕಮಿಷನರ್ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರೊಂದಿಗೆ ಮಾತುಕತೆ ನಡೆಸುವುದಾಗಿ ತೀರ್ಮಾನಿಸಿಸಲಾಗಿತ್ತು. ಆದರೆ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಸೆಪ್ಟೆಂಬರ್ನಲ್ಲಿ ಇಸ್ಲಾಮಾಬಾದ್ಗೆ ಭೇಟಿ ನೀಡಿದ್ದರ ಹಿನ್ನೆಲೆಯಲ್ಲಿ ಈ ಮಾತುಕತೆಯನ್ನು ರದ್ದು ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ನವಾಜ್ ಶರೀಫ್, ಭಾರತ ವಿದೇಶಾಂಗ ಕಾರ್ಯದರ್ಶಿ ಜತೆಗಿನ ಮಾತುಕತೆಯನ್ನು ರದ್ದು ಮಾಡಿದ್ದು, ಕಾಶ್ಮೀರಿ ನಾಯಕರ ಜತೆಗೆ ಮಾತನಾಡುವುದರಲ್ಲಿ ಹೊಸತೇನೂ ಇರಲಿಲ್ಲ ಎಂಬ ಕಾರಣಕ್ಕಾಗಿಯೇ ಎಂದು ಹೇಳಿದ್ದಾರೆ.
ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ನಾವಿದನ್ನು ಕಾಪಾಡಿಕೊಳ್ಳಲು ಬದ್ಧರಾಗಿದ್ದೇವೆ ಎಂದು ಹೇಳಿದ ಶರೀಫ್,ಕಾಶ್ಮೀರ ಸಮಸ್ಯೆಯ ಬಗ್ಗೆ ಅರ್ಥ ಪೂರ್ಣವಾದ ಮಾತುಕತೆ ನಡೆದರೆ ಮಾತ್ರ ಪ್ರಸ್ತುತ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ. ಆದಾಗ್ಯೂ ಈ ಬಗ್ಗೆ ಉಭಯ ರಾಷ್ಟ್ರಗಳು ಹೆಚ್ಚಿನ ಮುತುವರ್ಜಿ ವಹಿಸಿವೆ ಎಂದು ತಿಳಿಸಿದ್ದಾರೆ.