ಮುಂಬೈ : 'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿ ಸಾವಿಗೀಡಾಗಿದ್ದಾನೆ ಎಂದು ನಂಬಲಾಗಿದ್ದ ಮುಂಬೈ ನ ಯುವಕ ಆರಿಫ್ ಮಜೀದ್ ಭಾರತಕ್ಕೆ ವಾಪಸ್ಸಾಗಿದ್ದಾನೆ.
ನ.28ರಂದು ಆತ ಮನೆಗೆ ಬಂದಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಕಲ್ಯಾಣ್ ನಗರದಿಂದ ಆರಿಫ್ ಮಜೀದ್, ಶಹೀನ್ ತಂಕೀ, ಫಹಾದ್ ಶೇಖ್ ಮತ್ತು ಅಮನ್ ತಂಡೇಲ್ ಎಂಬ ಯುವಕರು ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿದ್ದಾರೆಂದು ಶಂಕಿಸಲಾಗಿತ್ತು.
ಉಗ್ರ ಸಂಘಟನೆ ಸೇರಿದ್ದಾರೆನ್ನಲಾದ ಯುವಕ ಭಾರತಕ್ಕೆ ವಾಪಸ್ಸಾಗಿರುವ ಬಗ್ಗೆ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದಿರುವ ಎನ್.ಐ.ಎ ತನಿಖಾ ದಳ ಆರಿಫ್ ಮಜೀದ್ ನನ್ನು ವಿಚಾರಣೆಗೆ ಒಳಪಡಿಸಿದೆ.
ಆಗಸ್ಟ್ 26ರಂದು ಆರಿಫ್ ಸಿರಿಯಾದಲ್ಲಿ ಐ.ಎಸ್.ಐಸ್ ಗಾಗಿ ಹೋರಾಡುತ್ತಿದ್ದಾಗ ಹತ್ಯೆಗೀಡಾಗಿದ್ದಾನೆ ಎಂದು ಕುಟುಂಬ ಸದಸ್ಯರಿಗೆ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಆರೀಫ್ ಮೃತಪಟ್ಟಿದ್ದಾನೆ ಎಂದು ನಂಬಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಆತ ಬದುಕಿದ್ದಾನೆ ಎಂಬುದು ಖಾತ್ರಿಯಾಗಿತ್ತು. ಆತ ಭಾರತಕ್ಕೆ ಬರಲು ತೀರ್ಮಾನಿಸಿದ್ದಾನೆ ಎಂದು ಮಾಧ್ಯಮಗಳಲ್ಲಿ ಇತ್ತೀಚೆಗಷ್ಟೆ ವರದಿಗಳು ಪ್ರಕಟಗೊಂಡಿದ್ದವು.