ನವದೆಹಲಿ : ಪ್ರತಿಯೊಂದು ಹನಿ ನೀರು ಸದ್ಬಳಕೆಯಾಗುವ ಸೂಕ್ಷ್ಮ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಶೇ.90 ರಷ್ಟು ಅನುದಾನ ಒದಗಿಸಬೇಕು. ನೀರಾವರಿ ಯೋಜನೆಗಳಲ್ಲಿ ಗರಿಷ್ಠ 40 ಹೆಕ್ಟೇರ್ ಮಾತ್ರ ಸೂಕ್ಷ್ಮ ನೀರಾವರಿ ಅಳವಡಿಸಬೇಕೆಂಬ ನಿರ್ಬಂಧವನ್ನು ಸಡಿಲಿಸಬೇಕು ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ‘ಜಲಮಂಥನ’ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನೀರಿನ ಉಳಿತಾಯ, ಭೂಮಿ ಸವಳು-ಜವಳು ಆಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿ ಅತ್ಯಂತ ಪರಿಣಾಮಕಾರಿಯಾಗಿದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಸೂಕ್ಷ್ಮ ನೀರಾವರಿ ಯೋಜನೆಯಾದ ತುಬಚಿ-ಬಬಲೇಶ್ವರ ಏತ ನೀರಾವರಿ, ಸಿಂಗಟಾಲೂರು ಏತ ನೀರಾವರಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯ ಸಂಪೂರ್ಣ ಅಚ್ಚುಕಟ್ಟು ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ವಿಶ್ವಕ್ಕೆ ಮಾದರಿಯಾದ ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.90 ರಷ್ಟು ಅನುದಾನ ಒದಗಿಸಿ ಆರ್ಥಿಕ ಬೆಂಬಲ ನೀಡಬೇಕು ಎಂದು ಕೋರಿದರು.
ಕೇಂದ್ರ ಸರ್ಕಾರದ ಪ್ರಸ್ತುತ ನಿಯಮಾವಳಿ ಪ್ರಕಾರ ಯಾವುದೇ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ಶೇ.10 ರಷ್ಟು ಭಾಗದಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಬಹುದಾಗಿದೆ. ಆದರೆ ಈ ಮಿತಿ 40 ಗರಿಷ್ಠ 40 ಹೆಕ್ಟೇರ್ ಮೀರಬಾರದು. ವಾಸ್ತವವಾಗಿ ಈ ನಿರ್ಬಂಧದಿಂದಾಗಿ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ವಿಸ್ತರಿಸಲು ಅಡಚಣೆಯಾಗಿದೆ. ಕೃಷ್ಣಾ ಮೇಲ್ದಂಡೆಯಂತ ಬೃಹತ್ ಯೋಜನೆಯ ಅಚ್ಚುಕಟ್ಟು ಪ್ರದೇಶ 11 ಲಕ್ಷ ಹೆಕ್ಟೇರ್ಗೆ ಹೋಲಿಸಿದಲ್ಲಿ 40 ಹೆಕ್ಟೇರ್ ಅತ್ಯಂತ ಸಣ್ಣದಾಗುತ್ತದೆ. ಕೇಂದ್ರ ಸರ್ಕಾರ ಈ ನಿರ್ಬಂಧವನ್ನು ಸಡಿಲಿಸಿ ನೀರಾವರಿ ಯೋಜನೆಗಳ ಡಿಪಿಆರ್(ವಿಸ್ತ್ರತ ಯೋಜನಾ ವರದಿ)ಗೆ ಅನುಗುಣವಾಗಿ ಆರ್ಥಿಕ ನೆರವು ನೀಡಬೇಕು ಎಂದರು.
ಪ್ರಸ್ತುತ ಸಿಎಡಿಡಬ್ಲುಎಂ(ಕಮಾಂಡ್ ಏರಿಯಾ ಡೆವಲಪ್ಮೆಂಟ್ ಆಂಡ್ ವಾಟರ್ ಮ್ಯಾನೇಜಮೆಂಟ್) ಅಡಿಯಲ್ಲಿ ಕೈಗೊಳ್ಳಲಾಗುವ ಯೋಜನೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಪ್ರಮಾಣ 50:50 ಎಂದಿದೆ. ಕೇಂದ್ರ ಸರ್ಕಾರ ಈ ಪ್ರಮಾಣವನ್ನು 75:25 ಕ್ಕೆ ಹೆಚ್ಚಿಸಿ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಪ್ರೋತ್ಸಾಹಿಸಬೇಕು. ಅದೇ ರೀತಿ ಪ್ರಸ್ತುತ ಸಿಎಡಿಡಬ್ಲುಎಂ ಅಡಿಯಲ್ಲಿ ಕೈಗೊಳ್ಳುವ ಯೋಜನೆ ಕಾಮಗಾರಿಗಳ ಪ್ರತಿ ಯುನಿಟ್ ದರವನ್ನು ಹೆಚ್ಚಿಸಬೇಕು. ಪ್ರಸ್ತುತ ಈ ಯೋಜನೆಯಡಿ ಪ್ರತಿ ಯುನಿಟ್ಗೆ ಅಂದರೆ ಹೆಕ್ಟೇರ್ಗೆ 25 ಸಾವಿರ ರೂ. ಇದ್ದು ಅದನ್ನು 35 ಸಾವಿರ ರೂ. ವರೆಗೆ ಹೆಚ್ಚಿಸಬೇಕು ಎಂದರು.
ಸಿಎಡಿ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷದ ಅನುದಾನದ ಪೂರ್ಣ ಹಣವನ್ನು ಅದೇ ವರ್ಷ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಹಿಂದಿನ ವರ್ಷಗಳ ಬಾಕಿ 142.26 ಕೋಟಿ ರೂ. ಬರಬೇಕಾಗಿದೆ. ಆದರೆ ಕಳೆದ ಆಗಷ್ಟ್ನಲ್ಲಿ ಕೇಂದ್ರ ಸರ್ಕಾರದಿಂದ ಪತ್ರವೊಂದು ಬಂದಿದ್ದು ಸರ್ಕಾರ ಹಿಂದಿನ ಬಾಕಿ ಬಿಡುಗಡೆಗೊಳಿಸುವುದನ್ನು ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ. ಒಂದೊಮ್ಮೆ ಕೇಂದ್ರ ಸರ್ಕಾರದಿಂದ ಬಾಕಿ ಅನುದಾನ ಬಿಡುಗಡೆಯಾಗದಿದ್ದಲ್ಲಿ ಸಿಎಡಿ ಕಾಮಗಾರಿಗಳಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೆಪ್ಟಂಬರ್ 22 ರಂದು ಕೇಂದ್ರಕ್ಕೆ ಪತ್ರ ಬರೆದು ಬಾಕಿ ಅನುದಾನ ಬಿಡುಗಡೆಗೊಳಿಸಲು ವಿನಂತಿಸಿದೆ ಎಂಬ ಮಾಹಿತಿ ನೀಡಿದರು.
ಆರ್ಆರ್ಆರ್ ಕಾಮಗಾರಿಗಳಿಗೆ ಈಗ ನೀಡಲಾಗುತ್ತಿರುವ ಶೇ.25 ರಷ್ಟು ಅನುದಾನವನ್ನು ಶೇ.50 ಕ್ಕೆ ಹೆಚ್ಚಿಸಬೇಕು. ಎಫ್.ಎಂ.ಪಿ. ಅನುದಾನವನ್ನು ಶೇ.75 ಕ್ಕೆ ಹೆಚ್ಚಿಬೇಕು ಎಂದರು. ಎಇಬಿಪಿ ಯೋಜನೆಯ ಬದಲಾದ ಮಾರ್ಗಸೂಚಿಗಳು ರಾಜ್ಯದ ಯೋಜನೆಗಳಿಗೆ ಮಾರಕವಾಗಿವೆ. ಈ ಮಾರ್ಗಸೂಚಿಯಂತೆ ಯೋಜನಾ ವೆಚ್ಚದ ಶೇ.50 ರಷ್ಟು ಹಣ ಖರ್ಚಾಗಿರಬೇಕು ಮತ್ತು ಶೇ.50 ರಷ್ಟು ಕಾಮಗಾರಿ ಭೌತಿಕ ಪ್ರಗತಿ ಆಗಿರಬೇಕು ಎಂಬುದಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಸ್ಟೇಜ್-3 ರಂಥ ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಭಾರೀ ಮೊತ್ತದ ಬಂಡವಾಳದ ಅಗತ್ಯವಿರುತ್ತದೆ. ಈ ನಿಯಮದಂತೆ ಕೇಂದ್ರ ಸರ್ಕಾರದ ಅನುದಾನ ಕ್ರಿಯಾ ಯೋಜನೆಯ ಶೇ.37.5 ರಷ್ಟು ಮಾತ್ರ. ಅಂದರೆ ಕ್ರಿಯಾ ಯೋಜನೆಯ ಶೇ.50ಕ್ಕೆ ಶೇ.75 ರಷ್ಟು. ರಾಜ್ಯ ಸರ್ಕಾರದಿಂದ ಇಂಥ ಬೃಹತ್ ಯೋಜನೆಗೆ ಆರ್ಥಿಕ ಬೆಂಬಲ ದೊರಕುವುದಿಲ್ಲ. ಹಾಗಾಗಿ ಈ ಹಿಂದಿನ ನಿಯಮಾವಳಿಯಂತೆ ಅನುದಾನ ಒದಗಿಸಬೇಕು ಎಂದರು.
ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ, ಕೇಂದ್ರ ಸಚಿವ ಸುರೇಶ ಪ್ರಭು, ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ಕೇಂದ್ರ ಜಲಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳು, ನೀರಾವರಿ ತಜ್ಞರು, ಸಿಡಬ್ಲುಸಿ ಅಧಿಕಾರಿಗಳು, ವಿವಿಧ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಜಲಮಂಥನದಲ್ಲಿ ಪಾಲ್ಗೊಂಡಿದ್ದರು.