ಬೆಂಗಳೂರು : ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸಧ್ಯದಲ್ಲೇ ವಿಧಾನ ಮಂಡಲದ ಸಧನದ ಮುಖಂಡರು, ಸಂಸದರು ಮತ್ತು ಆ ಭಾಗದ ಪ್ರಮುಖರ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಕಾವೇರಿ ಕಣಿವೆ ಪ್ರದೇಶಗಳಲ್ಲಿ ಮಳೆನೀರು ಸಂಗ್ರಹ ಪ್ರಮಾಣ ಅತಿ ಕಡಿಮೆ ಇದ್ದು, ನೀರು ಕುಡಿಯುವ ನೀರಿಗೆ ಮೀಸಲಿಡಲಾಗುವುದು ಎಂದರು.
ಪ್ರಸಕ್ತವಾಗಿ ರಾಜ್ಯದಲ್ಲಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೃಷ್ಣ ಮೇಲ್ದಂಡೆ ಮೂರನೆ ಹಂತದ ಯೋಜನೆ ಸೇರಿದಂತೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಅಗತ್ಯವಿದ್ದು ಮುಂದಿನ ಎರಡು ಆಯವ್ಯಯಗಳಲ್ಲಿ ನೀರಾವರಿ ಯೋಜನೆಗೆ ಹೆಚ್ಚು ಹಣ ಮೀಸಲಿಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗುವುದು ಎಂದು ಮಾತನಾಡಿದ ನೀರಾವರಿ ಸಚಿವರು ಕೃಷ್ಣಾ ಮೇಲ್ಡಂಡೆ ಮೂರನೇ ಹಂತ ಹೊರತುಪಡಿಸಿ ಉಳಿದ ಎಲ್ಲಾ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮುಂಬರುವ ನವೆಂಬರ್ ತಿಂಗಳಲ್ಲಿ ಏಷ್ಯಾದಲ್ಲೇ ಅತಿದೊಡ್ಡದಾದ ಹನಿ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದ ಸಚಿವರು ರಾಜ್ಯದಲ್ಲಿರುವ ಜಲಾಶಯಗಳ ಸುರಕ್ಷತೆಗೆ ಆದ್ಯತಾ ಕ್ರಮ ಕೈಗೊಳ್ಳಲಾಗಿದ್ದು ಈ ಸಂಬಂಧ ವಿಶ್ವಬ್ಯಾಂಕ್ ವತಿಯಿಂದ 443 ಕೋಟಿ ರೂ. ನೆರವನ್ನು ಪಡೆಯಲಾಗಿದೆ ಎಂದರು.
ಮೇಕೆದಾಟು ಯೋಜನೆಯಲ್ಲಿ ಕೆಲವು ನಗರಗಳಿಗೆ ಕುಡಿಯುವ ನೀರು ಸರಬರಾಜು ಹಾಗೂ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡುವ ವಿಸ್ತೃತ ಯೋಜನಾ ವರದಿ ಸಿದ್ದವಿದೆ ಎಂದು ಮಾತನಾಡಿದ ನೀರಾವರಿ ಸಚಿವರು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಅರ್ಕಾವತಿ ಯೋಜನೆ ಪುನಶ್ಛೇತನಕ್ಕೆ ಕರೆದಿದ್ದ ಅಂತರರಾಷ್ಟ್ರೀಯ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಸಂಸ್ಥೆ ಮುಂದೆ ಬಾರದ ಹಿನ್ನೆಲೆಯಲ್ಲಿ ಇಲಾಖೆಯ ಮೂಲಕವೇ ಪುನಶ್ಛೇತನಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.