ಬೆಂಗಳೂರು : ತುಂಗಾ ಅಣೆಕಟ್ಟೆ ಆಧುನೀಕರಣ ಯೋಜನೆಯ ಪ್ರಸ್ತಾವನೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಸಲಹಾ ಸಮಿತಿಯ ಮುಂಬರುವ ಸಭೆಯಲ್ಲಿ ಪರಿಗಣನೆಗೆ ಬರಲಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ತಿಳಿಸಿದ್ದಾರೆ.
ಈ ಸಂಬಂಧ ಕರ್ನಾಟಕದ ರಾಜ್ಯಸಭಾ ಸದಸ್ಯರೂ ಆಗಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಅವರು ಬರೆದ ಪತ್ರಕ್ಕೆ ಉತ್ತರಿಸಿರುವ ಅವರು, ತುಂಗಾ ಅಣೆಕಟ್ಟೆ ಆಧುನಿಕರಣ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಜಲ ಆಯೋಗ ಪರಿಶೀಲಿಸಿ ಅಂತಿಮಗೊಳಿಸಿದೆ. ಹಾಗಾಗಿ ಈ ಪ್ರಸ್ತಾವನೆಯನ್ನು ಸಚಿವಾಲಯದ ಮುಂಬರುವ ಸಲಹಾ ಸಮಿತಿಯ ಸಭೆಯಲ್ಲಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತುಂಗಾ ಅಣೆಕಟ್ಟೆ ಆಧುನೀಕರಣ ಯೋಜನೆ ಪ್ರಸ್ತಾವನೆಯನ್ನು ಆದಷ್ಟು ಬೇಗ ಪರಿಗಣಿಸಬೇಕು ಎಂದು ಉಮಾ ಭಾರತಿ ಅವರಿಗೆ ವೆಂಕಯ್ಯನಾಯ್ಡು ಅವರು 2015ರ ಜ. 19ರಂದು ಪತ್ರ ಬರೆದಿದ್ದರು. ಇದಕ್ಕೆ ಮಾ. 31ಕ್ಕೆ ಉತ್ತರ ನೀಡಿರುವ ಉಮಾಭಾರತಿ, ಪ್ರಸ್ತಾವನೆಯನ್ನು ಪರಿಗಣಿ ಸಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ.
ಅದೇ ರೀತಿ 2014-15ನೇ ಹಣಕಾಸು ವರ್ಷದಲ್ಲಿ ನಾರಾಯಣಪುರ ಎಡದಂಡೆ ಕಾಲುವೆಗೆ 70 ಕೋಟಿ ರೂ., ತುಂಗಾ ಮೇಲ್ದಂಡೆ ಯೋಜನೆಗೆ 70 ಕೋಟಿ ರೂ., ಮತ್ತು ರಾಮೇಶ್ವರ ಏತ ನೀರಾವರಿ ಯೋಜನೆಗೆ 10.82 ಕೋಟಿ ರೂ. ಸೇರಿದಂತೆ ಮೂರು ಯೋಜನೆಗಳಿಗೆ ಮೊದಲ ಕಂತಿನಲ್ಲಿ ಒಟ್ಟು 150 ಕೋಟಿ ರೂ. ಕೇಂದ್ರದ ಸಹಾಯಾನುದಾನ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ.