ಹರಿದ್ವಾರ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ನಮಾಮಿ ಗಂಗೆ ಯೋಜನೆಗೆ ಅಧಿಕೃತ ಚಾಲನೆ ದೊರೆತಿದೆ.
ಉತ್ತರಾಖಂಡದ ಹರಿದ್ವಾರದಲ್ಲಿ 250 ಕೋಟಿ ರೂ. ವೆಚ್ಚದ 43 ಯೋಜನೆಗಳಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಜಲಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ನದಿ ಪುನಶ್ಚೇತನ ಸಚಿವೆ ಉಮಾ ಭಾರತಿ, ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಮಹೇಶ್ ಶರ್ಮಾ, ಸಂಸದರು ಉಪಸ್ಥಿತಿರಿದ್ದರು.
ಈ ವೇಳೆ ಮಾತನಾಡಿದ ಉಮಾ ಭಾರತಿ, ಕೇವಲ ಗಂಗಾ ನದಿ ಶುದ್ಧೀಕರಿಸುವ ಹಾಗೂ ನಿರ್ವಹಣೆ ಮಾಡುವ ಯೋಜನೆ ಇದಾಗಿಲ್ಲ. ಕಳೆದ 29 ವರ್ಷಗಳಿಂದ ನದಿಗಾಗಿ ವ್ಯಯಿಸಿರುವ 4,000 ಕೋಟಿ ವೆಚ್ಚದ ಕಾರ್ಯಕ್ರಮಗಳ ಕಡೆಗೂ ಗಮನ ಹರಿಸಲಾಗುವುದೆಂದರು ಎಂದರು.
ಅಕ್ಟೋಬರ್ 2016ರ ವೇಳೆಗೆ ಮೊದಲ ಹಂತ ಮುಗಿಯಲಿದೆ. 2ನೇ ಹಂತದ ಶುದ್ಧೀಕರಣಕ್ಕೆ 2 ವರ್ಷ ಹಿಡಿಯಲಿದೆ ಗಂಗಾ ನದಿ ಧಾರ್ಮಿಕ ಮಹತ್ವ ಪಡೆದಿದ್ದು, ಜನರ ನಂಬಿಕೆಗೆ ಧಕ್ಕೆಯಾಗದಂತೆ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.