ಚೆನ್ನೈ : ಡ್ರಗ್ ಕಳ್ಳಸಾಗಾಣೆ ಪ್ರಕರಣದಲ್ಲಿ ಶ್ರೀಲಂಕಾದಿಂದ ಗಲ್ಲುಶಿಕ್ಷೆಗೆ ಗುರಿಯಾಗಿದ್ದ 5 ಮೀನುಗಾರರು ತಮಿಳುನಾಡಿಗೆ ವಾಪಸ್ಸಾಗಿದ್ದಾರೆ.
ಕಳೆದ 2 ದಿನಗಳ ಹಿಂದೆ ಶ್ರೀಲಂಕಾ ಸರ್ಕಾರ 5 ಮೀನುಗಾರರ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿ ಬಿಡುಗಡೆ ಮಾಡಿತ್ತು. ನ.21ರ ಮಧ್ಯಾಹ್ನ ರಾಮೇಶ್ವರದ ಮೀನುಗಾರರು, ಏರ್ ಇಂಡಿಯಾ ವಿಮಾನದಲ್ಲಿ ಚೆನ್ನೈಗೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಮಂತ್ರಿಗಳಾದ ಬಿ ವಲಾರ್ಮತಿ, ಡಾ. ಎಸ್ ಸುಂದರರಾಜ್ ಮತ್ತು ಕೆ ಎ ಜಯಪಾಲ್, ಕೇಂದ್ರ ರಾಜ್ಯ ಸಚಿವರಾದ ಬಿಜೆಪಿ ಮುಖಂಡ ರಾಧಾಕೃಷ್ಣನ್, ರಾಜ್ಯ ಬಿಜೆಪಿ ಅಧ್ಯಕ್ಷ ತಮಿಳಿಸೈ ಸೌಂದರರಾಜನ್, ಮೀನುಗಾರರನ್ನು ಬರಮಾಡಿಕೊಂಡಿದ್ದಾರೆ.
ಬಿಡುಗಡೆಯಾಗಿರುವ ಎಮರ್ಸನ್, ಪಿ ಅಗಸ್ಟಸ್, ಆರ್.ವಿಲ್ಸನ್, ಕೆ.ಪ್ರಸಾತ್ ಮತ್ತು ಜೆ ಲಾಂಗ್ಲೆಟ್ ಮೀನುಗಾರರು ತಮ್ಮ ಊರಿಗೆ ತೆರಳುವ ಮುನ್ನ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಡ್ರಗ್ ಕಳ್ಳಸಾಗಾಣೆ ಪ್ರಕರಣದಲ್ಲಿ ನವೆಂಬರ್ 2011ರಲ್ಲಿ ಶ್ರೀಲಂಕಾ ಪೊಲೀಸರು ಈ ಮೀನುಗಾರರನ್ನು ಬಂಧಿಸಿದ್ದರು. ಕೊಲಂಬೊ ಉಚ್ಚನ್ಯಾಯಾಲಯ ಅಕ್ಟೋಬರ್ 30 ರಂದು ಗಲ್ಲು ಶಿಕ್ಷೆ ವಿಧಿಸಿತ್ತು.
ಈ ಹಿನ್ನೆಲೆಯಲ್ಲಿ ರಾಮೇಶ್ವರಂ ಹಾಗೂ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಶ್ರೀಲಂಕಾ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆದಿತ್ತು. ಈ ಪ್ರಕರಣದಲ್ಲಿ ಶ್ರೀಲಂಕಾ ಸರ್ಕಾರದ ಜೊತೆ ಮಾತುಕತೆ ನಡೆಸಲು ತಮಿಳುನಾಡಿನ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರೊಂದಿಗೆ ಮಾತನಾಡಿದ ನಂತರ ಮೀನುಗಾರರಿಗೆ ಕ್ಷಮಾಪಣೆ ನೀಡಲಾಗಿತ್ತು.