ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೆಹರು ಅವರ ಪರಂಪರೆಯನ್ನು ಇತಿಹಾಸದ ಪುಟದಿಂದ ಅಳಿಸಿಹಾಕಲು ಯತ್ನಿಸುತ್ತಿದೆ. ಅಲ್ಲದೆ, ನೆಹರು ಅವರ ಕುರಿತಾದ ಅಂತಾರಾಷ್ಟ್ರೀಯ ಸಮಾವೇಶವೊಂದನ್ನು ಆಯೋಜಿಸುವುದಕ್ಕೆ ಹೆಜ್ಜೆ ಹೆಜ್ಜೆಗೂ ಅಡ್ಡಿಯನ್ನು ಉಂಟು ಮಾಡಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.
ನೆಹರು ಅವರ 125ನೇ ಜನ್ಮದಿನಾಚರಣೆ ಸ್ಮರಣಾರ್ಥ ಆಯೋಜಿಸಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ನೆಹರು ಅವರ ವಿಚಾರಗಳು ಮತ್ತು ರಾಜಕೀಯ ಚಿಂತನೆಗಳು ಇಂದಿಗೂ ಪ್ರಸ್ತುತ. ನೆಹರು ಅವರ ಪರಂಪರೆಯನ್ನು ನಾವು 70 ವರ್ಷದಿಂದ ಕಾಪಾಡಿಕೊಂಡು ಬಂದಿದ್ದೇವೆ. ಕೆಲವರು ನೆಹರು ಪರಂಪರೆಯನ್ನು ಉಜ್ಜಿ ಅಳಿಸಿಹಾಕುವ ಕನಸು ಕಾಣುತ್ತಿದ್ದಾರೆ. ಆದರೆ ನಾನು ಅದನ್ನು ಉಳಿಸಿ ಬೆಳೆಸಲು ಶ್ರಮಿಸುತ್ತೇನೆ ಎಂದರು.
ಈ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನೆಹರು ಅವರ ವಿಚಾರಧಾರೆಗಳು ಇಂದು ಸಂಕಷ್ಟಕ್ಕೆ ಸಿಲುಕಿವೆ. ಆದರೆ ನಾವು ನೆಹರು ಅವರು ಕಟ್ಟಿ ಬೆಳೆಸಿದ ಜಾತ್ಯತೀತ, ಒಳಗೊಳ್ಳುವಿಕೆ ಮತ್ತು ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಹೋರಾಡಲು ಬದ್ಧವಾಗಿರಬೇಕು ಎಂದು ಕರೆ ನೀಡಿದರು.