ಪಾಟ್ನಾ : ಎರಡು ದಶಕಗಳ ವೈರತ್ವ ಮರೆತು ಒಂದಾಗಿರುವ ಆರ್ ಜೆ ಡಿ ನಾಯಕ ಲಾಲು ಪ್ರಸಾದ್ ಯಾದವ್ ಹಾಗೂ ಜೆಡಿಯುನ ನಿತೀಶ್ ಕುಮಾರ್ ಅವರು 2015ರ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ತಮ್ಮ ಪಕ್ಷಗಳನ್ನು ವಿಲೀನಗೊಳಿಸುವ ಸಾಧ್ಯತೆ ಇದೆ.
ಹರ್ಯಾಣ, ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಬಳಿಕ ಲಾಲು ಪ್ರಸಾದ್ ಯಾದವ್, ನಿತೀಶ್ ಹಾಗೂ ಜೆಡಿಯು ಅಧ್ಯಕ್ಷ ಶರದ್ ಯಾದವ್ ಈ ಕುರಿತು ಸಮಾಲೋಚನೆ ನಡೆಸಿದ್ದಾರೆ. ಆರ್ ಜೆ ಡಿ- ಜೆಡಿಯು ವಿಲೀನಕ್ಕೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಬಲವಾಗುತ್ತಿರುವ ಬಿಜೆಪಿಯನ್ನು ಎದುರಿಸಲು ಈ ರೀತಿಯ ರಾಜಕೀಯ ಧ್ರುವೀಕರಣ ನಡೆಯುತ್ತಿದೆ ಎಂದು ಲಾಲು ಅವರ ನಿಕಟವರ್ತಿಯಾಗಿರುವ ಆರ್ಜೆಡಿ ನಾಯಕರೊಬ್ಬರು ತಿಳಿಸಿದ್ದಾರೆ.
2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಎರಡೂ ಪಕ್ಷಗಳು ಕಣಕ್ಕೆ ಇಳಿದರೆ, ಸೀಟು ಹೊಂದಾಣಿಕೆ ವಿಚಾರ ಕಗ್ಗಂಟಾಗಬಹುದು. ಸದ್ಯ 118 ಸದಸ್ಯರನ್ನು ಹೊಂದಿರುವ ಜೆಡಿಯು ಸಹಜವಾಗಿಯೇ ಹೆಚ್ಚು ಸ್ಥಾನಗಳಿಗೆ ಹಕ್ಕು ಮಂಡಿಸಲಿದೆ. ಕೇವಲ 23 ಸದಸ್ಯರನ್ನು ಹೊಂದಿರುವ ಆರ್ಜೆಡಿ, ಲೋಕಸಭೆ ಚುನಾವಣೆಯಲ್ಲಿನ ತನ್ನ ಸಾಧನೆ ಮುಂದಿಟ್ಟುಕೊಂಡೇ ಹೆಚ್ಚು ಸ್ಥಾನಗಳಿಗೆ ಬೇಡಿಕೆ ಇಡಲಿದೆ. ಆ ಸಮಸ್ಯೆಯನ್ನು ಇಲ್ಲವಾಗಿಸುವ ಸಲುವಾಗಿ ಪಕ್ಷಗಳನ್ನೇ ವಿಲೀನಗೊಳಿಸುವ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ಲಾಲು, ನಿತೀಶ್ ಅವರು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಕೆಲ ತಿಂಗಳ ಹಿಂದೆ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಎದುರಿಸಿದ್ದರು. ಆ ಪೈಕಿ ಈ ಮೈತ್ರಿಕೂಟಕ್ಕೆ ಆರು ಸ್ಥಾನಗಳಲ್ಲಿ ಜಯ ದೊರೆತಿತ್ತು.