Mangalore : ಹೊರ ದೇಶದಲ್ಲಿ ಸಂಗ್ರಹವಾಗಿರುವ ಕೆಂಪುಹಣವನ್ನು ಮುಂದಿನ 6 ತಿಂಗಳೊಳಗೆ ಭಾರತಕ್ಕೆ ತರುವ ಎಲ್ಲ ಸಿದ್ದತೆಗಳು ನಡೆದಿದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ತಿಳಿಸಿದ್ದಾರೆ.
ಮಂಗಳೂರಿನ ಸಿಟಿಜನ್ಸ್ ಕೌನ್ಸಿಲ್ ಆಶ್ರಯದಲ್ಲಿ ಸಂಘನಿಕೇತನದಲ್ಲಿ ಆಜೋಜಿಸಲಾಗಿದ್ದ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ವಿರುದ್ಧ ಸಮರ ಎಂಬ ಕುರಿತು ಅವರು ಉಪನ್ಯಾಸ ನೀಡಿದರು.
ಕಪ್ಪುಹಣ ವಾಪಸ್ ಗೆ ಸಂಬಂಧಿಸಿದಂತೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಶೃಂಗಸಭೆಯಲ್ಲಿ ಈ ಕುರಿತಂತೆ ಮೋದಿಯವರು ಜಾಗತಿಕ ಮಟ್ಟದಲ್ಲಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಭ್ರಷ್ಟಾಚಾರಮುಕ್ತ ಭಾರತದ ಸಂಕಲ್ಪ ನರೇಂದ್ರ ಮೋದಿಯವರ ಮೂಲಕ ನಡೆಯುತ್ತಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗುವ ದೊಡ್ಡವರನ್ನು ಒಳಗೆ ಹಾಕಿದರೆ, ಇತರರೂ ಪಾಠ ಕಲಿಯುತ್ತಾರೆ. ದೇಶದ ಸಂಪತ್ತು, ಆಸ್ತಿಯನ್ನು ದುರ್ಬಳಕೆ ಮಾಡುವವರ ವಿರುದ್ದ ಕ್ರಮ ಅಗತ್ಯ ಎಂದರು.
ಇದೇ ವೇಳೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ರಕ್ಷಣಾತ್ಮಕವಾಗಿ ವರ್ತಿಸುತ್ತಿದ್ದಾರೆ. ಆದರೆ ತರಂಗಾಂತರ ವ್ಯವಹಾರ ಕುರಿತಂತೆ ನಡೆಸಿದ ವ್ಯವಹಾರದಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಅವರು ಜೈಲಿಗೆ ಹೋಗಲಿದ್ದಾರೆ. ಅವರ ಪತ್ನಿ ಚಿಟ್ಫಂಡ್ ಪ್ರಕರಣಕ್ಕೆ ಸಂಬಂಧಿಸಿ ಹಾಗೂ ಇತರ ಹಲವು ಪ್ರಕರಣಕ್ಕೆ ಸಂಬಂಧಿಸಿ ಜೈಲಿಗೆ ಹೋಗುವುದು ಬಹುತೇಕ ಸಿದ್ದವಾದಂತಿದೆ ಎಂದವರು ಹೇಳಿದರು.
ಪಾಕಿಸ್ತಾನದ ಉಗ್ರರಿಂದ ಭಾರತಕ್ಕೆ ದೊಡ್ಡ ಮಟ್ಟದ ಆಪತ್ತು ಎದುರಾಗುವುದು ಸತ್ಯ. ಅವರನ್ನು ಮಟ್ಟ ಹಾಕಲು ನಾವು ನಮ್ಮ ಇತರ ನೆರೆರಾಷ್ಟ್ರಗಳ ಸಹಾಯ ಪಡೆಯುವುದು ಆವಶ್ಯಕ. ಈ ನಿಟ್ಟಿನಲ್ಲಿ ಶ್ರೀಲಂಕಾ, ಇಸ್ರೇಲ್, ಚೀನ ಜತೆಗೂ ನಮ್ಮ ಸಂಬಂಧ ಸುಧಾರಿಸಿದೆ ಎಂದು ತಿಳಿಸಿದರು.
ಹಿಂದೂಸ್ತಾನದಲ್ಲಿರುವ ಹಿಂದೂಗಳ ಮನಸ್ಥಿತಿಯಲ್ಲೂ ಸ್ವಲ್ಪ ಗೊಂದಲಗಳಿವೆ. ತಾನು ಹಿಂದೂ ಎಂಬ ಅನನ್ಯನತೆಯನ್ನು ಒಪ್ಪಿಕೊಳ್ಳುವುದು ಮುಖ್ಯ. ಆಸ್ಟ್ರೇಲಿಯದಲ್ಲಿ ಶೆರಿಯಾ ಕಾನೂನು ದೇಶದ ಕಾನೂನಿಗೆ ವಿರುದ್ದ ಎಂದಾಗ, ವಿರೋಧ ಬಂದರೂ ಕೂಡ ಅಲ್ಲಿನ ಸರ್ಕಾರ ಅದನ್ನು ಒಪ್ಪಲಿಲ್ಲ. ಅಂತಹ ನಿಲುವುಗಳು ಭಾರತಕ್ಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲವೇ ಎಂದವರು ವಿಶ್ಲೇಷಿಸಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣ ದೊಡ್ಡ ರೀತಿಯ ಅವ್ಯವಹಾರಗಳು ನಡೆದಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾಗಿರುವ ಸೋನಿಯಾ ಗಾಂಧಿ ಸೇರಿದಂತೆ ಇತರರಿಗೆ ಸಮನ್ಸ್ ಕೂಡ ಜಾರಿಯಾಗಿದೆ. ಡಿಸೆಂಬರ್ನಲ್ಲಿ ಪ್ರಕರಣದ ಮುಂದಿನ ತನಿಖೆ ನಡೆಯಲಿದ್ದು, ಸೋನಿಯಾ ತಿಹಾರ್ ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಸುಬ್ರಹ್ಮಣ್ಯನ್ ಸ್ವಾಮಿ ತಿಳಿಸಿದ್ದಾರೆ