ಪಾಟ್ನಾ : 'ಬಿಹಾರ'ಕ್ಕೆ ವಿಶೇಷ ಸ್ಥಾನಮಾನ ನೀಡಿದರೆ ಎನ್.ಡಿ.ಎ ಗೆ ವಾಪಸಾಗುತ್ತೇವೆ ಎಂದು ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹೇಳಿಕೆ ನೀಡಿದ್ದಾರೆ.
ನ.15ರಂದು ಬಿಹಾರದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮಾಂಝಿ, ಕೇಂದ್ರ ಸರ್ಕಾರ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿದರೆ ನರೇಂದ್ರ ಮೋದಿ ಸರ್ಕಾರವನ್ನು ಬೆಂಬಲಿಸುತ್ತೇವೆ ಅಲ್ಲದೇ, ಎನ್.ಡಿ.ಎ ಮೈತ್ರಿಕೂಟಕ್ಕೂ ಜೆಡಿಯು ವಾಪಸಾಗಲಿದೆ ಎಂದಿದ್ದಾರೆ.
ಮಾಂಝಿ ಅವರ ಈ ಹೇಳಿಕೆ ಬಿಹಾರ ರಾಜಕೀಯದಲ್ಲಿ ಕೋಲಾಹಲ ಸೃಷ್ಠಿಸಿದೆ. ಒಂದೆಡೆ ಬಿಹಾರ ಮಾಜಿ ಸಿ.ಎಂ ನಿತೀಶ್ ಕುಮಾರ್ ನರೇಂದ್ರ ಮೋದಿ ಅವರ ವಿರುದ್ಧ ಹೇಳಿಕೆ ನೀಡುತ್ತಿದ್ದರೆ ಮತ್ತೊಂದೆಡೆ ಜಿತನ್ ರಾಮ್ ಮಾಂಝಿ, ಎನ್.ಡಿ.ಎ ಮೈತ್ರಿ ಕೂಟಕ್ಕೆ ವಾಪಸಾಗುವ ಹೇಳಿಕೆ ನೀಡಿದ್ದಾರೆ.
ಬಿಹಾರದಲ್ಲಿ ಇತ್ತೀಚೆಗಷ್ಟೇ ನಡೆದ ಲೋಕಸಭೆ, ವಿಧಾನಸಭೆ ಉಪಚುನಾವಣೆ, ರಾಜ್ಯಸಭೆಯ ಉಪಚುನಾವಣೆ ವೇಳೆ ಜೆಡಿಯು, ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್.ಜೆ.ಡಿ ಯೊಂದಿಗೆ ಕೈಜೋಡಿಸಿತ್ತು. ಅಲ್ಲದೇ ಜೆಡಿಯು ನಾಯಕ ನಿತೀಶ್ ಕುಮಾರ್ ನಿರಂತರವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಂಝಿ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ.