ನಾಯ್ ಪ್ಯಿ ತಾವ್ : ತಮ್ಮ ನೇತೃತ್ವದ ಭಾರತ ಸರ್ಕಾರ ಆಕ್ಟ್ ಈಸ್ಟ್ ಪಾಲಿಸಿ(ಪೂರ್ವ ದೇಶಗಳೊಂದಿಗೆ ಸಕ್ರಿಯ ಸಂಬಂಧ) ಬಗ್ಗೆ ಗಮನ ಕೇಂದ್ರೀಕರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಸಿಯಾನ್-ಇಂಡಿಯಾ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಸೀಯಾನ್ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿದೆ. ನವದೆಹಲಿ, ದಕ್ಷಿಣಪೂರ್ವ ಏಷ್ಯಾ ರಾಷ್ಟ್ರಗಳ ಕೂಟಕ್ಕೆ ಮಹತ್ವ ನೀಡಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದಿರುವ ತಮ್ಮ ನೇತೃತ್ವದ ಎನ್.ಡಿ.ಎ ಸರ್ಕಾರ, ಪೂರ್ವ ದೇಶಗಳೊಂದಿಗಿನ ಸಂಬಂಧವನ್ನು ಉತ್ತಮಗೊಳಿಸಲು ಒತ್ತು ನೀಡುತ್ತಿದೆ. ಆಸಿಯಾನ್ ಶೃಂಗಸಭೆಯಲ್ಲಿ ಮಾತನಾಡಲು ಅವಕಾಶ ದೊರೆತಿರುವುದು ಹೆಮ್ಮೆ ಹಾಗೂ ಸಂತಸದ ವಿಷಯವಾಗಿದೆ. ಪ್ರಮುಖವಾಗಿ ಭಾರತದೊಂದಿಗೆ ಸಾಂಸ್ಕೃತಿಕ, ಐತಿಹಾಸಿಕ ಸಂಬಂಧ ಹೊಂದಿರುವ ನೆರೆ ರಾಷ್ಟ್ರ ಮಾಯನ್ಮಾರ್ ನಲ್ಲಿ ಭಾಗವಹಿಸಿ ಮಾತನಾಡುತ್ತಿರುವುದು ಅತೀವ ಸಂತಸ ಉಂಟುಮಾಡಿದೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ವೇಳೆ ಮೈಕ್ ಕೈಕೊಟ್ಟ ಪ್ರಸಂಗವೂ ನಡೆಯಿತು. ನಂತರ ಭಾಷಣ ಮುಂದುವರೆಸಿದ ಪ್ರಧಾನಿ ಮೋದಿ ಆಸಿಯಾನ್-ಇಂಡಿಯಾ ಸಂಬಂಧಗಳ ಕುರಿತು ಮಾತನಾಡಿದರು.