ಮುಂಬೈ : ಕೆಲ ದಿನಗಳ ಹಿಂದೆ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಹಾರಾಷ್ಟ್ರದ ಬಿಜೆಪಿ ಸರ್ಕಾರಕ್ಕೆ ನ.12 ಅಗ್ನಿಪರೀಕ್ಷೆ ನಡೆಯಲಿದೆ. ಮುಖ್ಯಮಂತ್ರಿ ಫಡ್ನವೀಸ್ ವಿಶ್ವಾಸಮತ ಯಾಚಿಸಬೇಕಿದೆ.
ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಶಿವಸೇನೆ ಸ್ಪಷ್ಟಪಡಿಸಿದ್ದು, ನಾವು ವಿಪಕ್ಷ ಸ್ಥಾನದಲ್ಲಿ ಆಸೀನರಾಗುವುದಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸ್ಪಷ್ಟ ಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಎನ್ಸಿಪಿಯ ಸಹಾಯದೊಂದಿಗೆ ದೇವೇಂದ್ರ ಫಡ್ನವೀಸ್ ವಿಶ್ವಾಸಮತ ಸಾಬೀತು ಪಡಿಸಿ, ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗುವ ಸಾಧ್ಯತೆಯಿದೆ. ಆದರೆ ಕೊನೇ ಕ್ಷಣದಲ್ಲಿ ಎನ್ಸಿಪಿ ಕೈಕೊಟ್ಟರೆ ಎಂಬ ಆತಂಕವೂ ಬಿಜೆಪಿಯಲ್ಲಿದೆ.
ಈ ಮಧ್ಯೆ, ವಿಶ್ವಾಸಮತ ಯಾಚನೆಗೂ ಮುನ್ನ ವಿಧಾನಸಭೆ ಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಶಿವಸೇನೆ ಮೂರೂ ಪಕ್ಷಗಳು ತಮ್ಮ ಅಭ್ಯರ್ಥಿ ಗಳನ್ನು ಕಣಕ್ಕೆ ದೂಡಿರುವುದರಿಂದ ಸ್ಪೀಕರ್ ಯಾರಾಗಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ತನ್ನ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಈಗಾಗಲೇ ಕಾಂಗ್ರೆಸ್ ಪಕ್ಷ ಎನ್ಸಿಪಿ ಮೊರೆ ಹೋಗಿದೆ. ಒಂದು ವೇಳೆ ವಿಪಕ್ಷಗಳೆಲ್ಲಾ ಸೇರಿ ಒಮ್ಮತದಿಂದ ಸ್ಪೀಕರ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಿಜೆಪಿ ಅಭ್ಯರ್ಥಿಗೆ ಸೋಲುಂಟಾಗುತ್ತದೆ.
ಅಂತಹ ಸಂದರ್ಭದಲ್ಲಿ ಪ್ರತಿಪಕ್ಷದ ಸ್ಪೀಕರ್ ಸಾರಥ್ಯದಲ್ಲಿ ವಿಧಾನಸಭೆ ಅಧಿವೇಶನ ನಡೆಸುವುದು ದೇವೇಂದ್ರ ಅವರಿಗೆ ಕಂಟಕಪ್ರಾಯವಾಗಲಿದೆ. ಎನ್ಸಿಪಿ ಕಲಾಪ ಬಹಿಷ್ಕಾರ ಮಾಡುತ್ತಾ?: ಬಿಜೆಪಿಯ ಓರ್ವ ಸದಸ್ಯನ ನಿಧನದಿಂದಾಗಿ 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಬಲ 287ಕ್ಕೆ ಕುಸಿದಿದೆ. ಬಹುಮತಕ್ಕೆ 144 ಸ್ಥಾನಗಳು ಬೇಕು. 121 ಶಾಸಕರನ್ನು ಹೊಂದಿರುವ ಬಿಜೆಪಿ ಈಗಾಗಲೇ ಏಳು ಪಕ್ಷೇತರರು, ಬಹುಜನ ವಿಕಾಸ ಆಗಧಿ ಪಕ್ಷದ ಮೂವರು ಶಾಸಕರು ಹಾಗೂ ಇನ್ನಿತರರ ಬೆಂಬಲ ಪಡೆದುಕೊಂಡಿದೆ. ಇದರ ಜತೆಗೆ ಎನ್ಸಿಪಿ ಕೂಡ ನೆರವಿಗೆ ಬಂದರೆ ಸುಲಭ ರೀತಿಯಲ್ಲಿ ವಿಶ್ವಾಸಮತ ಗೆಲ್ಲುತ್ತದೆ.
ವಿಶ್ವಾಸಮತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೋ ಅಥವಾ ಗೈರು ಹಾಜರಾಗಬೇಕೋ ಎಂಬ ಕುರಿತು ಆ ಸಂದರ್ಭದಲ್ಲಿ ಶಾಸಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಎನ್ಸಿಪಿ ಪರಮೋಚ್ಚ ನಾಯಕ ಶರದ್ ಪವಾರ್ ತಿಳಿಸಿದ್ದಾರೆ. 41 ಸದಸ್ಯರನ್ನು ಹೊಂದಿರುವ ಎನ್ಸಿಪಿಯೇನಾದರೂ ಸದನದಿಂದ ದೂರ ಉಳಿದರೆ ವಿಧಾನಸಭೆಯ ಒಟ್ಟು ಬಲ 246ಕ್ಕೆ ಕುಸಿಯಲಿದೆ. ಆಗ ಬಿಜೆಪಿಗೆ ಬಹುಮತ ಸಾಬೀತುಪಡಿಸಲು 124 ಶಾಸಕರ ಬೆಂಬಲವಷ್ಟೇ ಸಾಕಾಗುತ್ತದೆ. ಆದರೆ ಒಂದು ವೇಳೆ ಎನ್ಸಿಪಿ ತನ್ನ ನಿಲುವು ಬದಲಿಸಿ ಶಿವಸೇನೆಯ ಜತೆ ಸೇರಿಕೊಂಡು ಸರ್ಕಾರದ ವಿರುದ್ಧ ಮತ ಹಾಕಿದರೆ ಸರ್ಕಾರದ ಪತನವಾಗಲಿದೆ.