ಮುಂಬೈ : ಮುಂಬಯಿನಲ್ಲಿ ಭಾನುವಾರ ಸಂಜೆ ನಡೆಯುತ್ತಿದ್ದ ಮೇಕ್ ಇನ್ ಇಂಡಿಯಾ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಭಾರೀ ಬೆಂಕಿ ಭುಗಿಲೆದ್ದಿತು. ಬೆಂಕಿ ತೀವ್ರ ಸ್ವರೂಪದ್ದಾಗಿದ್ದು, ಸಂಪೂರ್ಣ ವೇದಿಕೆ ಬೆಂಕಿಗೆ ಆಹುತಿಯಾಗಿದೆ. ಆದರೆ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕ ಗಣ್ಯರೂ, ಬಾಲಿವುಡ್ ನಟ ನಟಿಯರೂ ಭಾಗವಹಿಸಿದ್ದರು. ಸುಮಾರು 5 ಸಾವಿರ ಜನ ಸೇರಿದ್ದ ಕಾರ್ಯಕ್ರಮದಲ್ಲಿ, ಬೆಂಕಿ ಕಾಣಿಸಿಕೊಂಡ ತಕ್ಷಣ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
14 ಅಗ್ನಿ ಶಾಮಕ ವಾಹನ, 10 ನೀರಿನ ಟ್ಯಾಂಕ್ ಗಳನ್ನು ಬಳಸಿ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಬಂಧ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆ ಮಾತುಕತೆ ನಡೆಸಿದ್ದಾರೆಂದು ಪಿಎಂಓ ಕಚೇರಿ ಟ್ವೀಟ್ ಮಾಡಿದೆ.
ಈ ಅನಾಹುತಕ್ಕೆ ಕಾರಣಗಳು ತಿಳಿದು ಬಂದಿಲ್ಲ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.