ನವದೆಹಲಿ : ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಶೀಘ್ರದಲ್ಲೇ ದೇಶಾದ್ಯಂತ ಜನಸಂಪರ್ಕ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷವನ್ನು ಮತ್ತೆ ತಳಮಟ್ಟದಿಂದ ಸಂಘಟಿಸಿ ಜನರ ಬಳಿ ತಲುಪುವ ಉದ್ದೇಶದಿಂದ ದೇಶಾದ್ಯಂತ ಜನಸಂಪರ್ಕ ಯಾತ್ರೆ ನಡೆಸಲು ಮುಂದಾಗಿದ್ದಾರೆ. ಮೊದಲು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಈ ಯಾತ್ರೆ ಆರಂಭವಾಗಲಿದ್ದು, ಇದರ ಮೊದಲ ಹಂತವಾಗಿ ಕೇರಳದಲ್ಲಿ ಜನಸಂಪರ್ಕ ಯಾತ್ರೆ ನಡೆಯಲಿದೆ.
ಬಳಿಕ ಎಲ್ಲಾ ರಾಜ್ಯಗಳಿಗೂ ಜನಸಂಪರ್ಕ ಯಾತ್ರೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.
ಈ ಹಿಂದೆ 1997 ಹಾಗೂ 1989ರಲ್ಲಿ ಇಂದಿರಾಗಾಂಧಿ ಹಾಗೂ ರಾಜೀವ್ಗಾಂಧಿ ಪಕ್ಷ ಸೋತ ವೇಳೆ ಇದೇ ರೀತಿ ದೇಶಾದ್ಯಂತ ಯಾತ್ರೆ ನಡೆಸಿದ್ದರು. ಇದೀಗ ಅಜ್ಜಿ ಹಾಗೂ ತಂದೆಯ ಹಾದಿ ತುಳಿಯುತ್ತಿರುವ ರಾಹುಲ್ ಪಕ್ಷವನ್ನು ಮತ್ತೆ ಪುನರ್ ಸಂಘಟಿಸುವ ಉದ್ದೇಶದಿಂದಲೇ ಜನಸಂಪರ್ಕ ಯಾತ್ರೆ ಕೈಗೊಂಡಿದ್ದಾರೆ.
ಹೊಸ ವರ್ಷದ ಆರಂಭದಿಂದ ಕನ್ಯಾಕುಮಾರಿಯಿಂದ ಕಾಶ್ಮೀರದ ತುದಿಯವರೆಗೂ ರಾಹುಲ್ಗಾಂಧಿ ಈ ಯಾತ್ರೆ ನಡೆಸಲಿದ್ದು, ಕಾಂಗ್ರೆಸ್ ಪಕ್ಷ ದೇಶಕ್ಕೆ ಎಷ್ಟು ಅನಿವಾರ್ಯವೆನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ರಾಹುಲ್ಗಾಂಧಿ ಮನವರಿಕೆ ಮಾಡಿಕೊಡಲಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರಲು ಹಿಂದೇಟು ಹಾಕುತ್ತಿರುವುದು, ರೈತರ ಸಮಸ್ಯೆಗಳ ನಿರ್ಲಕ್ಷ್ಯ, ಕಾರ್ಮಿಕ ವಿರೋಧಿ ನೀತಿ ಹಾಗೂ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳ ಕಡೆಗಣನೆಯನ್ನು ಜನರ ಮುಂದೆ ಪ್ರಸ್ತಾಪಿಸಲಿದ್ದಾರೆ.
ಜನಸಂಪರ್ಕ ಯಾತ್ರೆ ಕೈಗೊಳ್ಳುವ ಬಗ್ಗೆ ಈಗಾಗಲೇ ರಾಹುಲ್ಗಾಂಧಿ ಒಂದು ತಂಡ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ದಿನಾಂಕ ನಿಗದಿಯಾಗಲಿದೆ ಎಂದು ತಿಳಿದುಬಂದಿದೆ.