ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಕಾಶ್ಮೀರದ ಮಾಜಿ ಪ್ರತ್ಯೇಕವಾದಿ ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜ್ಜದ್ ಲೋನೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಉಭಯ ನಾಯಕರ ಭೇಟಿ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸಜ್ಜದ್ ಲೋನೆ, ನಮ್ಮ ಪ್ರಧಾನಿ ತುಂಬಾ ಸರಳ ವ್ಯಕ್ತಿ ಹಾಗೂ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಹೊಂದಿರುವ ನಾಯಕ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಪ್ರಧಾನಿ ಅವರನ್ನು ಭೇಟಿ ಮಾಡಿರುವುದು ಸಂತಸವಾಗುತ್ತಿದೆ ಎಂದಿದ್ದಾರೆ.
ಈ ಭೇಟಿಯಲ್ಲಿ ಜಮ್ಮು-ಕಾಶ್ಮೀರ ಚುನಾವಣೆ ಮೈತ್ರಿ ಬಗ್ಗೆ ಮಾತುಕತೆ ನಡೆದಿಲ್ಲ. ಜಮ್ಮು-ಕಾಶ್ಮೀರದ ಅಭಿವೃದ್ಧಿ ಬಗ್ಗೆ ಮಾತನಾಡಿರುವುದಾಗಿ ಲೋನೆ ತಿಳಿಸಿದ್ದಾರೆ. ಅಲ್ಲದೇ ಪ್ರಧಾನಿ ಜಮ್ಮು-ಕಾಶ್ಮೀರದ ಅಭಿವೃದ್ಧಿ ಬಗ್ಗೆ ಸ್ಪಷ್ಟ ಯೋಜನೆ ಹೊಂದಿದ್ದು ಪ್ರಸಿದ್ಧ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಬಯಸಿದ್ದಾರೆ. ವೈದ್ಯಕೀಯ ಕಾಲೇಜು ಸ್ಥಾಪನೆ ಸೇರಿದಂತೆ ವಿದಿಧ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಲೋನೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿರ್ಧರಿಸುವುದಾಗಿ ಲೋನೆ ತಿಳಿಸಿದ್ದಾರೆ. ಪ್ರಸ್ತುತ ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡುವುದಾಗಿ ಪೀಪಲ್ಸ್ ಕಾನ್ಫರೆನ್ಸ್ ನಾಯಕ ತಿಳಿಸಿದ್ದಾರೆ.
ಸಜ್ಜದ್ ಲೋನೆ, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ, ಕೇಂದ್ರ ಸಚಿವ ಜೆ.ಪಿ ನಡ್ಡ ಹಾಗೂ ಬಿಜೆಪಿ ಮುಖಂಡ ರಾಮ್ ಮಾಧವ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಮಾಜಿ ಪ್ರತ್ಯೇಕವಾದಿಯೊಡನೆ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ್ದ ರಾಮ್ ಮಾಧವ್, ಜಮ್ಮು-ಕಾಶ್ಮೀರದಲ್ಲಿ ವಂಶಾಡಳಿತವನ್ನು ಅಳಿಸಿಹಾಕಲು, ಪ್ರಜಾಪ್ರಭುತ್ವವವನ್ನು ಪ್ರತಿಪಾದಿಸುವ ಯಾವ ಪಕ್ಷದೊಂದಿಗೂ ಮೈತ್ರಿಗೆ ಸಿದ್ಧ ಎಂದು ಹೇಳಿದ್ದರು. ಈ ಮೂಲಕ ಪೀಪಲ್ಸ್ ಕಾನ್ಫರೆನ್ಸ್-ಬಿಜೆಪಿ ಮೈತ್ರಿ ಬಗ್ಗೆ ಸುಳಿವು ನೀಡಿದ್ದರು.
ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪೀಪಲ್ಸ್ ಕಾನ್ಫರೆನ್ಸ್ ಹಿಡಿತ ಸಾಧಿಸಿದೆ. ಇದೀಗ ಸಜ್ಜದ್ ಲೋನೆ-ಮೋದಿ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು ಜಮ್ಮು-ಕಾಶ್ಮೀರದಲ್ಲಿ ಮಿಷನ್ 44+ ಸಾಧಿಸಲು ಸ್ಥಳೀಯ ನಾಯಕರನ್ನೇ ಮುಂದಿಟ್ಟುಕೊಂಡು ಬಿಜೆಪಿ ಭರ್ಜರಿ ತಂತ್ರ ರೂಪಿಸುತ್ತಿರುವುದು ಸ್ಪಷ್ಟವಾಗಿದೆ.