ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದಲ್ಲಿ ಅತಂತ್ರ ವಿಧಾನಸಭೆ ಉಂಟಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರತ್ಯೇಕವಾದಿ ಸಜ್ಜದ್ ಲೋನೆ, ತಾವು ವಿಪಕ್ಷ ಸ್ಥಾನದಲ್ಲಿರುವುದಾಗಿ ತಿಳಿಸಿದ್ದಾರೆ.
ಇದು ತಮ್ಮ ಮೊದಲ ಚುನಾವಣೆಯಾಗಿದ್ದು ರಾಜ್ಯದ ಅಭಿವೃದ್ಧಿಗಾಗಿ ವಿಧಾನಸಭೆಯಲ್ಲಿ ರಚನಾತ್ಮಕವಾಗಿ ಕಾರ್ಯನಿರ್ವಹಿಸುವುದಾಗಿ ಸಜ್ಜದ್ ಲೋನೆ ತಿಳಿಸಿದ್ದಾರೆ. ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ತಾವು ಯಾರೊಂದಿಗೂ ತೆರಳದೇ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ಧವಿರುವುದಾಗಿ ಸಜ್ಜದ್ ತಿಳಿಸಿದ್ದಾರೆ.
ಮಾಜಿ ಪ್ರತ್ಯೇಕವಾದಿ ಸಜ್ಜದ್ ಲೋನೆಜಮ್ಮು-ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸಲು ರಾಷ್ಟ್ರೀಯ ಪಕ್ಷಕ್ಕೆ ಬೆಂಬಲ ನೀಡುವ ಸಂಬಂಧ ಪ್ರತಿಕ್ರಿಯಿಸಿರುವ ಸಜ್ಜದ್ ಲೋನೆ,
ರಾಷ್ಟ್ರೀಯ ಪಕ್ಷಗಳು ರಾಷ್ಟ್ರೀಯ ನೀತಿ ಬದ್ಧರಾಗಿರುತ್ತಾರೆ. ತಮ್ಮ ಪಕ್ಷ ಯಾರಿಗೂ ಬೆಂಬಲ ನೀಡದೇ ವಿಪಕ್ಷ ಸ್ಥಾನದಲ್ಲಿ ಮುಂದುವರೆಯುತ್ತದೆ ಎಂದು ಸಜ್ಜದ್ ಲೋನೆ ಹೇಳಿದ್ದಾರೆ.
ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಮೂಲಕ ಸಜ್ಜದ್ ಲೋನೆ, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿ ಚುನಾವಣೆಯ ಕೇಂದ್ರ ಬಿಂದುವಾಗಿದ್ದರು.