ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದಲ್ಲಿ ಮಿಷನ್ 44+' ಸಾಧಿಸಲು ಬಿಜೆಪಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಓಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಬಿಜೆಪಿಯ ಮಿಷನ್ 44+ ಹಗಲು ಕನಸು ಎಂದು ಲೇವಡಿ ಮಾಡಿದ್ದಾರೆ. ಈ ಮೂಲಕ ಬಿಜೆಪಿ ತನ್ನ ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂದಿದ್ದಾರೆ.
ಬಿಜೆಪಿಯ ಒಡೆದು ಆಳುವ ತಂತ್ರ ಚುನಾವಣೆಯಲ್ಲಿ ಫಲಿಸುವುದಿಲ್ಲ. ಮಿಷನ್ 44+ ಎಂಬುದು ಹಗಲು ಕನಸು, ರಾಜ್ಯದ ಜನತೆ ಎಂದಿಗೂ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಜನತೆಗೆ ಒಗ್ಗಟ್ಟಾಗಿರಲು ಕರೆ ನೀಡಿರುವ ಓಮರ್ ಅಬ್ದುಲ್ಲಾ, ಬಿಜೆಪಿಯ ಒಡೆದು ಆಳುವ ತಂತ್ರಕ್ಕೆ ಜನತೆ ಬಲಿಯಾಗಬಾರದೆಂದು ಹೇಳಿದ್ದಾರೆ.
ಭಾವನಾತ್ಮಕ ನೆಲೆಯಲ್ಲಿ ಬಿಜೆಪಿ ಮತ ಸೆಳೆಯಲು ಯತ್ನಿಸುತ್ತಿದೆ. ಆದರೆ ರಾಜ್ಯದ ಜನತೆ ತಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಎನ್.ಸಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಅಬ್ದುಲ್ಲಾ ಕರೆ ನೀಡಿದ್ದಾರೆ.
ಇದೇ ವೇಳೆ ವಿಪಕ್ಷ ಪಿಡಿಪಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಓಮರ್ ಅಬ್ದುಲ್ಲಾ, ಪಿಡಿಪಿ ಅಧಿಕಾರಕ್ಕೆ ಬರಲು ಅವಕಾಶವಾದಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ನ.22ರಂದು ಪ್ರಧಾನಿ ಮೋದಿ ಜಮ್ಮು-ಕಾಶ್ಮೀರದಲ್ಲಿ ಪ್ರಚಾರ ನಡೆಸಲಿದ್ದಾರೆ.