ಮುಂಬೈ : ನ.10ರಿಂದ ಆರಂಭವಾಗಿರುವ ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಶಿವಸೇನೆ ವಿಪಕ್ಷ ಸ್ಥಾನ ಅಲಂಕರಿಸಿದೆ.
ಬೆಳಗ್ಗೆ 11 ಘಂಟೆಗೆ ಅಧಿವೇಶನ ಆರಂಭವಾಗಿದ್ದು, ಅಧಿವೇಶನಕ್ಕೂ ಮೊದಲು, ರಾಜಭವನದಲ್ಲಿ ರಾಜ್ಯಪಾಲ ವಿದ್ಯಾಸಾಗರ್ ರಾವ್, ಹಿರಿಯ ಶಾಸಕ ಜೀವ ಪಾಂಡು ಗಾವಿಟ್ ಅವರಿಗೆ ಹಂಗಾಮಿ ಸಭಾಧ್ಯಕ್ಷರ ಪ್ರಮಾಣವಚನ ಬೋಧಿಸಿದರು.
ನಂತರ ಗಾವಿಟ್ ಅವರು, ವಿಧಾನಸಭೆಯಲ್ಲಿ ಆಯ್ಕೆಯಾದ ಹೊಸ ಸದಸ್ಯರ ಪ್ರಮಾಣವಚನವನ್ನು ನಿರ್ದೇಶಿಸಿದರು. ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನ ಮೂರು ದಿನಗಳವರೆಗೆ ನಡೆಯಲಿದೆ. ನ.12ರಂದು ಅಂದರೆ ಅಧಿವೇಶನದ ಕೊನೆಯ ದಿನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಈ ಅಧಿವೇಶನದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜ್ಯಪಾಲರ ಸೂಚನೆಯಂತೆ ಸರ್ಕಾರದ ಬಹುಮತ ಸಾಬೀತುಪಡಿಸಲಿದ್ದಾರೆ.
ಶಿವಸೇನೆ ಪಕ್ಷದ ಮೂಲಗಳ ಪ್ರಕಾರ ಸಭಾದ್ಯಕ್ಷರ ಸ್ಥಾನಕ್ಕೆ ತನ್ನ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ. ಬಿಜೆಪಿ ಬಹುಮತ ಸಾಬೀತುಪಡಿಸಲು ಎನ್ ಸಿಪಿ ಯ ಬೆಂಬಲ ತೆಗೆದುಕೊಂಡರೆ ಶಿವಸೇನೆ ವಿರೋಧಪಕ್ಷವಾಗಿ ಉಳಿಯುವುದು ಎಂದು ಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಗುಡುಗಿದ್ದಾರೆ. ಬಿಜೆಪಿಗೆ ತನ್ನ ಅಂತಿಮ ನಿರ್ಣಯ ತಿಳಿಸಲು 2 ದಿನಗಳ ಕಾಲಾವಕಾಶ ನೀಡಿದ್ದಾರೆ.