ಶ್ರೀನಗರ : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ಸಿದ್ಧಪಡಿಸಿದ್ದ ನಾಲ್ಕು ಅಂಶಗಳ ಸೂತ್ರ ಕಾಶ್ಮೀರ ವಿವಾದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಆಧಾರವಾಗಬೇಕಿತ್ತು. ಆದರೆ ಮುಷರ್ರಫ್ ಅವರ ಪ್ರಯತ್ನಗಳನ್ನು ಭಾರತ ವಿಫಲಗೊಳಿಸಿತು ಎಂದು ಬಿಜೆಪಿ ಮಾಜಿ ಸಂಸದ ಹಾಗೂ ಹೆಸರಾಂತ ನ್ಯಾಯವಾದಿ ರಾಮ್ ಜೇಠ್ಮಲಾನಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಮಾಣಿಕ ಉದ್ದೇಶದೊಂದಿಗೆ ಮುಷರ್ರಫ್ ಭಾರತಕ್ಕೆ ಬಂದಿದ್ದರು. ಕಾಶ್ಮೀರ ಸಮಸ್ಯೆಗೆ ಅವರು ಮುಂದಿಟ್ಟ ಪ್ರಸ್ತಾವ ಅದ್ಭುತವಾಗಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು ಕಾಶ್ಮೀರ ಸಮಸ್ಯೆಗೆ ತೆರೆ ಎಳೆಯಬೇಕಿತ್ತು. ಆದರೆ ಅವರ ಪ್ರಯತ್ನಗಳನ್ನು ಭಾರತವೇ ನಿಷ್ಫಲಗೊಳಿಸಿತು ಎಂದು ತಿಳಿಸಿದ್ದಾರೆ.
ಮುಷರ್ರಫ್ ತಾವು ಸಿದ್ಧಪಡಿಸಿದ್ದ ಪ್ರಸ್ತಾವಗಳನ್ನು ಸ್ನೇಹಿತರ ಮೂಲಕ ನನಗೂ ಕಳುಹಿಸಿಕೊಟ್ಟಿದ್ದರು. ಕಾಶ್ಮೀರ ಸಮಿತಿ ಮುಖ್ಯಸ್ಥನಾಗಿದ್ದ ನಾನು ಅದಕ್ಕೆ ಕೆಲವೊಂದು ತಿದ್ದುಪಡಿಗಳನ್ನು ಸೂಚಿಸಿದ್ದೆ. ಅದನ್ನು ಮುಷರ್ರಫ್ ಕೂಡ ಒಪ್ಪಿಕೊಂಡಿದ್ದರು ಎಂದರು.
ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ಒದಗಿಸಲಾಗಿರುವ ವಿಶೇಷ ಸ್ಥಾನಮಾನವನ್ನು ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ. ಆ ವಿಧಿಯ ಮಹತ್ವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ವಿವರಿಸಿ ಹೇಳಿದ್ದೆ. ಆನಂತರವಷ್ಟೇ 370ನೇ ವಿಧಿ ವಿಚಾರದಲ್ಲಿ ಬಿಜೆಪಿ ಮೌನಕ್ಕೆ ಜಾರಿದೆ ಎಂದ ಅವರು, 370ನೇ ವಿಧಿ ಬಗ್ಗೆ ಬಿಜೆಪಿ ಯಾವಾಗಲೂ ಮಾತನಾಡುತ್ತಿರುತ್ತದೆ. ಆ ಪೈಕಿ ಕೆಲವರಿಗೆ ಸಂವಿಧಾನವೇ ಅರ್ಥವಾಗಿಲ್ಲ. ಆ ವಿಧಿಯನ್ನು ರದ್ದುಗೊಳಿಸಲು ಆಗದು ಎಂದು ಮೋದಿ ಅವರಿಗೆ ತಿಳಿಸಿದ್ದೆ. ಅಲ್ಲದೆ ಆ ಬಗ್ಗೆ ಮಾತನಾಡದಂತೆ ಬಿಜೆಪಿ ನಾಯಕರಿಗೆ ಸೂಚಿಸಿ ಎಂದೂ ಕೋರಿದ್ದೆ. ಅದಾದ ಬಳಿಕ ಬಿಜೆಪಿ ಸುಮ್ಮನಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಜಮ್ಮು-ಕಾಶ್ಮೀರದ ಎಲ್ಲ ಪ್ರತ್ಯೇಕತಾವಾದಿಗಳು ಪಾಕಿಸ್ತಾನ ಏಜೆಂಟ್ಗಳಲ್ಲ. ಪ್ರತ್ಯೇಕತಾವಾದಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಜೇಠ್ಮಲಾನಿ ಪ್ರತ್ಯೇಕತಾವಾದಿಗಳ ಸಮರ್ಥನೆ ಮಾಡಿಕೊಂಡಿದ್ದಾರೆ.