ಶ್ರೀನಗರ : ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಇಲ್ಲಿನ ಮೇಂದಾರ್ ವಲಯದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ.
ಭಾರತೀಯ ಸೇನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದ್ದು, ಕಳೆದ 72 ಗಂಟೆಗಳಲ್ಲಿ 5ನೇ ಬಾರಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸಿದ್ದು, ಗುಂಡಿನ ಚಕಮಕಿ ಮುಂದುವರೆದಿದೆ.
ಅ.3ರಂದು ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಗೆ ಇಲ್ಲಿನ ಸಬ್ಜಿಯಾನ್ ಪ್ರದೇಶದಲ್ಲಿ ಬಾಲಕಿಯೊಬ್ಬಳು ಬಲಿಯಾಗಿದ್ದಳು. ಭಾರತೀಯ ಸೇನಾಧಿಕಾರಿಗಳ ಎಚ್ಚರಿಕೆ ನಡುವೆಯೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮುಂದುವರೆಸಿದೆ.
ಈ ನಡುವೆ್ ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ಕ್ಯಾತೆ ಒಂದೆಡೆ ಮುಂದುವರೆದಿದೆ. ಮತ್ತೊಂದೆಡೆ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳುತ್ತಿರುವ ಪಾಕ್, ಈಗ ಭಾರತದ ಮೇಲೆಯೇ ಗೂಬೆ ಕೂರಿಸುತ್ತಿದೆ. ಭಾರತೀಯ ಸೈನಿಕರು ಪಾಕ್ ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಪಾಕ್ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷ ಜನರಲ್ ಫರ್ವೇಜ್ ಮುಷ್ರಫ್ ಆರೊಪ ಮಾಡಿದ್ದಾರೆ. ಮತ್ತೊಮ್ಮೆ ಪಾಕಿಸ್ತಾನದ ತಾಳ್ಮೆ ಕೆಡಿಸಬೇಡಿ ಎಂದು ಎಚ್ಚರಿಸಿದ್ದಾರೆ.
ಗಡಿಯಲ್ಲಿ ಭಾರತೀಯ ಸೇನೆ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು, ಪಾಕ್ ಸೇನೆಯ ಸಹನೆ ಕೆಡಿಸಬೇಡಿ, ಭಾರತದ ಈ ದಾಳಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಪಾಕ್ ಸಹನೆ ಕಳೆದುಕೊಂಡರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ ಎಂದು ಧಮಕಿ ಹಾಕಿದ್ದಾರೆ.