ಜಮ್ಮು : ಒಂದು ದಿನದ ಜಮ್ಮು-ಕಾಶ್ಮೀರ ಭೇಟಿಯ ಸಂದರ್ಭದಲ್ಲಿ ಕತ್ರಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ, ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಭಾಗವಹಿಸಿದರು.
ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ನಿಮ್ಮ ತಂದೆ ತಾಯಿಗಳು ನಿಮಗೆ ಮಾಡಿದ್ದನ್ನು ನೆನೆಪಿಸಿಕೊಳ್ಳಿ, ಅವರು ನಿಮಗಾಗಿ ತಮ್ಮ ಸಂತೋಷ ತ್ಯಾಗ ಮಾಡಿದರು. ನೀವು ನಿಮ್ಮ ಬಾಲ್ಯದಲ್ಲಿ ಅಂದುಕೊಂಡದನ್ನು ಸಾಧಿಸಲು ಆಗದೇ ಇರಬಹುದು. ಅದರ ಕುರಿತು ಯೋಚಿಸುವುದನ್ನು ಬಿಟ್ಟು, ನೀವು ಈಗ ಏನು ಸಾಧಿಸಿದ್ದೀರಿ ಅದನ್ನು ಯೋಚಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತುಂಬಾ ದೂರುದ ಊರುಗಳಿಂದ ಬಂದ ಯಾತ್ರಿಗಳ ಕೊಡುಗೆಯಿಂದ ಈ ವಿಶ್ವವಿದ್ಯಾಲಯವನ್ನು ಕಟ್ಟಲಾಗಿದೆ. ಈ ವಿಶ್ವವಿದ್ಯಾಲಯಕ್ಕೆ ಅದೆಷ್ಟೋ ಬಡ ಯಾತ್ರಿಗಳ ಕೊಡುಗೆ ಇದೆ. ಆದ್ದರಿಂದ ಬಡವರಿಗಾಗಿ ಏನಾದರೂ ಮಾಡುವ ಪ್ರತಿಜ್ಞೆ ಮಾಡೋಣ. ನಮ್ಮ ದೇಶ ಹೊಸ ಎತ್ತರಕ್ಕೆ ಬೆಳೆಯುತ್ತಿದೆ. ಯುವ ಜನತೆಯಿಂದ ತುಂಬಾ ಸಾಧಿಸಬಹುದು. ಏನಾದರೂ ಮಾಡುವ ಕನಸು ಕಾಣಿ, ಯಾರಾದರೂ ಒಬ್ಬರು ಆಗಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಸಿಎಂ ಮೆಹಬೂಬಾ ಮುಫ್ತಿ, ರಾಜ್ಯಪಾಲರು ಹಾಜರಿದ್ದರು.
ಪಾಕ್ ಕದನ ವಿರಾಮ ಉಲ್ಲಂಘನೆ
ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಸಾಂಬಾ ವಿಭಾಗದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ.
ಮಂಗಳವಾರ ಬೆಳಗ್ಗೆ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಗಡಿ ಭದ್ರತಾ ಪಡೆಯ ಗಡಿ ಹೊರ ಠಾಣೆಯ ಮೇಲೆ ಪಾಕ್ ಸೇನೆ 4-5 ಸುತ್ತು ಗುಂಡು ಹಾರಿಸಿದೆ. ಪಹರೆಯಲ್ಲಿದ್ದ ಬಿ.ಎಸ್.ಎಫ್ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಗಡಿ ಭಾಗದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ಯೋಧರು ಗುಂಡಿನ ದಾಳಿ ನಡೆಸಿದ್ದು, ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ಹಿರಿಯ ಬಿ.ಎಸ್.ಎಫ್ ಅಧಿಕಾರಿ ತಿಳಿಸಿದ್ದಾರೆ.