ನವದೆಹಲಿ : ನ.9ರಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಮಿತ್ರಪಕ್ಷ ಶಿವಸೇನೆಗೆ ಎರಡು ಸ್ಥಾನಗಳನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ.
ಪ್ರಧಾನಿ ಮೋದಿ ನಿರ್ಧಾರಕ್ಕೆ ಶಿವಸೇನೆ ತನ್ನ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಆದರೆ ಈ ಎರಡೂ ಸ್ಥಾನಗಳು ಸಂಪುಟ ದರ್ಜೆಯವೇ ಅಥವಾ ರಾಜ್ಯ ದರ್ಜೆಯವೆ ಎಂಬುದು ತಿಳಿದುಬಂದಿಲ್ಲ.
ಮಹಾರಾಷ್ಟ್ರದಲ್ಲಿ ನ.12ಕ್ಕೆ ಬಿಜೆಪಿ ಸರ್ಕಾರ ಬಹುಮತ ಪರೀಕ್ಷೆ ಎದುರಿಸಬೇಕಿದೆ. ಅದಕ್ಕೂ ಮುನ್ನ ಶಿವಸೇನೆಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಎರಡು ಸ್ಥಾನ ನೀಡಲು ಉದ್ದೇಶಿಸಿರುವುದು ಮಹತ್ವ ಪಡೆದುಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕರೊಬ್ಬರು, ಸಂಪುಟ ವಿಸ್ತರಣೆ ವೇಳೆ ಎರಡು ಸ್ಥಾನಗಳನ್ನು ನೀಡುವುದಾಗಿ ಬಿಜೆಪಿ ಈ ಹಿಂದೆಯೇ ಭರವಸೆ ನೀಡಿತ್ತು. ಅದನ್ನು ಈಗ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ. ಶಿವಸೇನೆಯ ಒಬ್ಬ ಸದಸ್ಯ ಅನಂತ ಗೀತೆ ಮಾತ್ರ ಸದ್ಯ ಕೇಂದ್ರ ಸಚಿವ ಸಂಪುಟದಲ್ಲಿದ್ದಾರೆ.