ಬೆಂಗಳೂರು : ಹೊಸನಗರದ ಶ್ರೀ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮತ್ತು ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಮಠದಿಂದ ಮರಳಿ ಪಡೆಯುವ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಯನ್ನು ರಾಮಚಂದ್ರಾಪುರ ಮಠ ಸ್ವಾಗತಿಸಿದೆ. ಆದರೆ, ಈ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿಗಳು ಆರಂಭಿಸಿ ರುವ ಪ್ರಕ್ರಿಯೆ ಮತ್ತು ಅಡ್ವೋಕೇಟ್ ಜನರಲ್ ಹೈಕೋರ್ಟ್ಗೆ ನೀಡಿರುವ ಹೇಳಿಕೆ ಸರಕಾರದ ಗಮನಕ್ಕೆ ತಾರದೆ ನಡೆಸಿರುವ ಚಟುವಟಿಕೆಗಳೇ ಎಂದು ಪ್ರಶ್ನಿಸಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿರುವ ರಾಮಚಂದ್ರಾಪುರ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್ ಅವರು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಅಲ್ಲದೆ, ಈ ಎರಡೂ ಪ್ರಕರಣಗಳನ್ನು ಮುಕ್ತಾಯ ಗೊಳಿಸಲಾಗಿದೆ ಎಂಬ ಹಿಂಬರದ ನಿರೀಕ್ಷೆಯಲ್ಲಿ ಮಠ ಇರುವುದಾಗಿ ಹೇಳಿದ್ದಾರೆ.
ಬಹಿರಂಗ ಪತ್ರದಲ್ಲಿ ಏನಿದೆ?
ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ವಿಚಾರದಲ್ಲಿ ಸರಕಾರದ ಮುಖ್ಯ ಕಾರ್ಯ ದರ್ಶಿಗಳಿಂದ ಮಠಕ್ಕೆ 5 ಬಾರಿ ನೋಟಿಸ್ಗಳು ಬಂದಿವೆ. 2 ಬಾರಿ ಮುಖ್ಯ ಕಾರ್ಯ ದರ್ಶಿಗಳ ಸಮ್ಮುಖ ದಲ್ಲಿ ವಿಚಾರಣೆಗಳೂ ನಡೆದಿವೆ. ಈ ಪ್ರಕರಣ ದಲ್ಲಿ ಮಠಕ್ಕೆ ಪ್ರತಿಕೂಲವಾದ ಪ್ರಾಥಮಿಕ ಆದೇಶವೂ ಹೊರಬಿದ್ದಿದೆ. ಸೆ. 30ಕ್ಕೆ ನಿವೃತ್ತರಾಗಲಿದ್ದ ಮುಖ್ಯ ಕಾರ್ಯದರ್ಶಿ ಸೆ. 28ಕ್ಕೆ ವಿಚಾರಣೆ ನಿಗದಿಪಡಿಸಿ ಸೆ.26ಕ್ಕೆ ನೋಟಿಸ್ ನೀಡಿದರೆ ಭಕ್ತರಿಗೆ ಶಂಕೆ ಬಾರದೇ ಇರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಗೋಕರ್ಣದ ಮಹಾಬಲೇಶ್ವರ ದೇವ ಸ್ಥಾನದ ಕುರಿತಾಗಿ ಹೈಕೋರ್ಟ್ ಮುಖ್ಯ ನ್ಯಾ| ಎಸ್.ಕೆ. ಮುಖರ್ಜಿ, ನ್ಯಾ| ಆರ್. ಬಿ. ಬೂದಿಹಾಳ್ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆಸು ತ್ತಿರುವ ವೇಳೆ ಅಡ್ವೊಕೇಟ್ ಜನರಲ್ ಅವರು ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಮಠದಿಂದ ಹಿಂದಕ್ಕೆ ಪಡೆ ಯುವ ಇರಾದೆ ಇರುವುದಾಗಿ ನ್ಯಾಯ ಪೀಠದ ಮುಂದೆ ಉಲ್ಲೇಖೀಸಿದ್ದಾರೆ. ಅಂತಹ ಪ್ರಸ್ತಾಪವೇ ಇಲ್ಲ ಎಂದು ಸಿಎಂ ಹೇಳುವುದಾದರೆ ಯಾವುದನ್ನು ನಂಬಬೇಕೆಂದು ತಿಳಿಯದ ಸ್ಥಿತಿ ನಮ್ಮ ದಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಸಿಎಂ, ಮುಜರಾಯಿ ಸಚಿವರ ಗಮನಕ್ಕೆ ತಾರದೆ ಮುಖ್ಯ ಕಾರ್ಯದರ್ಶಿ, ಅಡ್ವೊಕೇಟ್ ಜನರಲ್ ಅವರು ಮಹತ್ವದ ತೀರ್ಮಾನ ತೆಗೆದುಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಮಠದ ಭಕ್ತರನ್ನು ಕಾಡುತ್ತಿದೆ. ಇದಲ್ಲದೆ ರಾಘವೇಶ್ವರ ಸ್ವಾಮೀಜಿ ಮತ್ತು ಮಠಕ್ಕೆ ಇತರ ಇಲಾಖೆಗಳಿಂದ ಕ್ಲೇಶ ಉಂಟಾಗುತ್ತಿರುವ ಹಲವು ಸಂಗತಿಗಳಿದ್ದು, ಬಯಸಿದಲ್ಲಿ ಅದನ್ನು ತಮ್ಮ ಮುಂದೆ ಮಂಡಿಸಲು ಸಿದ್ಧವಿರುವುದಾಗಿಯೂ ತಿಳಿಸಿದ್ದಾರೆ.
ಮಠಕ್ಕೆ ಆಡಳಿತಾಧಿಕಾರಿ ನೇಮಕ, ದೇವಸ್ಥಾನವನ್ನು ಮರಳಿ ಪಡೆಯುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂಬ ಹೇಳಿಕೆಯ ಕಾಳಜಿ ಮುಖ್ಯ ಕಾರ್ಯದರ್ಶಿ, ಅಡ್ವೋಕೇಟ್ ಜನರಲ್ ಮೂಲಕ ಕೃತಿಗಿಳಿದಾಗ ಭಕ್ತರ ಮನದ ಭಾರ ಇಳಿಯುತ್ತದೆ. ಆದ್ದರಿಂದ ಪ್ರಕರಣ ಮುಕ್ತಾಯವಾಗಿದೆ ಎಂಬ ಅಧಿಕೃತ ಬರಹದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಹೇಳಿದ್ದಾರೆ.
ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಸ್ತಾಪ ಮತ್ತು ಮಠಕ್ಕೆ ಹಸ್ತಾಂತರಿಸಿರುವ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು ವಾಪಸ್ ಪಡೆಯುವ ಕುರಿತು ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಎರಡೂ ಪ್ರಸ್ತಾವನೆಗಳು ಸರಕಾರದ ಮುಂದಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಬಹಿರಂಗ ಪತ್ರ ಬರೆದಿರುವ ಮಠವು ಸರಕಾರದ ಮಟ್ಟದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರಿಂದ ಇನ್ನಷ್ಟು ಸ್ಪಷ್ಟೀಕರಣ ಬಯಸಿದೆ.