ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿನ ಅಸಮರ್ಥ ಸರ್ಕಾರದಿಂದ ಅತ್ಯಾಚಾರಿಗಳಿಗೆ ಲೈಸೆನ್ಸ್ ನೀಡಿದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದರೂ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಸುಮ್ಮನೇ ಕುಳಿತಿದೆ. ಮುಖ್ಯಮಂತ್ರಿಗಳ ಮಗಳ ಮೇಲೆ, ಕೆ.ಜೆ.ಜಾರ್ಜ್ ಮಗಳ ಮೇಲೆ ಹೀಗಾಗಿದ್ದರೆ ಇವರು ಸುಮ್ಮನಿರುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.
ನಂದಿತಾ ಪ್ರಕರಣ ನಡೆದು 8 ದಿನಗಳಾದರು ತಪ್ಪಿತಸ್ಥರ ಬಂಧಿಸುವ ಯೋಗ್ಯತೆ ಇವರಿಗಿಲ್ಲ, ಗೃಹ ಸಚಿವರು, ಮಾಧ್ಯಮದವರು ಟಿ.ಆರ್.ಪಿಗಾಗಿ ಸುದ್ಧಿ ಪ್ರಸಾರ ಮಾಡುತ್ತವೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಾರ್ಜ್ ಅಸಮರ್ಥ ನಾಯಕರು ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿನ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಮಹಿಳೆಯರು, ನಾಗರಿಕರು ಪ್ರತಿಭಟನೆ ನಡೆಸಿದರೆ ಅವರನ್ನು ಬಂಧಿಸಿ ಜೈಲಿನಲ್ಲಿಡುತ್ತಾರೆ. ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಅತ್ಯಾಚಾರಿಗಳಿಗೆ ಬೆಂಬಲ ನೀಡುತ್ತಿದೆ. ಮೊದಲು ಕೆ.ಜೆ.ಜಾರ್ಜ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ನೋಂದವರಿಗೆ ನೈತಿಕ ಸ್ಥೈರ್ಯ ನೀಡಲು ಸಿಎಂ, ಗೃಹ ಸಚಿವರಿಗೆ ತಾಕಿತ್ತಿಲ್ಲ, ಇಂತಹ ಬೇಜವಾಬ್ದಾರಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ನಾನು ಇತಿಹಾಸದಲ್ಲಿಯೇ ನೋಡಿಲ್ಲ ಎಂದು ಕಿಡಿಕಾರಿದರು.