ನವದೆಹಲಿ : ಸುಳ್ಳು ಅತ್ಯಾಚಾರ ಪ್ರಕರಣಗಳ ಪರಿಣಾಮಗಳಿಂದ ಪುರುಷರನ್ನು ರಕ್ಷಿಸುವ ಮತ್ತು ಅವರ ಘನತೆ ಗೌರವಗಳನ್ನು ಎತ್ತಿ ಹಿಡಿಯುವ ಸಮಯ ಬಂದಿದೆ ಎಂದು ದೆಹಲಿಯ ವಿಚಾರಣಾ ನ್ಯಾಯಾಲಯ ಹೇಳಿದೆ. ವಕೀಲರೊಬ್ಬರ ಮೇಲೆ ದಾಖಲಾಗಿದ್ದ ಅತ್ಯಾಚಾರ ಕೇಸ್ ನ ವಿಚಾರಣೆ ನಡೆಸಿದ ನ್ಯಾಯಾಲಯ, ಇದೊಂದು ಸುಳ್ಳು ಪ್ರಕರಣ, ವಕೀಲರನ್ನು ಸಿಕ್ಕಿಸಿ ಹಾಕಲು ಮಾಡಿದ ಪಿತೂರಿ ಎಂದು ಹೇಳಿದೆ. ಈ ಸಂದರ್ಭದಲ್ಲಿ ಅನುಭವಿಸಿದ ಅವಮಾನ, ಯಾತನೆ, ಅವರು ಅನುಭವಿಸಿದ ದುಃಖ ಮತ್ತು ಅವರಿಗಾದ ಹಾನಿಗಾಗಿ ಈಗ ಪ್ರಕರಣ ದಾಖಲಿಸಿದ ಮಹಿಳೆಯ ವಿರುದ್ಧ ಕೇಸ್ ದಾಖಲಿಸಬಹುದೆಂದು ಹೇಳಿದೆ.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ಕಟ್ಟಡದಲ್ಲಿ ವಕೀಲರು 2010 ರಿಂದ 2012 ರ ವರೆಗೆ ತನ್ನನ್ನು ಪದೇ ಪದೇ ಅತ್ಯಾಚಾರ ಮಾಡಿದ್ದರು ಎಂದು ಮಹಿಳೆಯೊಬ್ಬರು ವಕೀಲರೊಬ್ಬರ ಮೇಲೆ ಪ್ರಕರಣ ದಾಖಲಿಸಿದ್ದರು. ಆದರೆ ಪ್ರಕರಣ ಹಿಂತೆಗೆದುಕೊಂಡ ಮಹಿಳೆ, ವಕೀಲ ಮುಗ್ಧ, ನಾನು ಸಿಟ್ಟಿನಿಂದ ಅವರ ಮೇಲೆ ಪ್ರಕರಣ ದಾಖಲಿಸಿರುವುದಾಗಿ ಹೇಳಿಕೆ ನೀಡಿದ್ದಾಳೆ.
ಯಾರೂ ಕೂಡ ಪುರುಷರ ಘನತೆ ಗೌರವಗಳ ಬಗ್ಗೆ ಚರ್ಚೆ ಮಾಡುವುದಿಲ್ಲ, ಎಲ್ಲರೂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾರೆ. ಪುರುಷರು ಮಹಿಳೆಯರಿಂದ ಕಿರುಕುಳ ಅನುಭವಿಸಿದಾಗ ಮತ್ತು ಸುಳ್ಳು ಪ್ರಕರಣದಲ್ಲಿ ದೋಷಾರೋಪ ಮಾಡಿದಾಗ ಮಹಿಳೆಯರಿಂದ ಪುರುಷರನ್ನು ರಕ್ಷಿಸಲು ಕಾನೂನು ಎಲ್ಲಿದೆ ? ಬಹುಶಃ ಈಗ ಅದಕ್ಕೆ ಸಮಯ ಬಂದಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ನಿವೇದಿತಾ ಅನಿಲ್ ಶರ್ಮ ಹೇಳಿದ್ದಾರೆ. ಸುಳ್ಳು ಪ್ರಕರಣಗಳಿಂದ ಸಮಾಜದಲ್ಲಿ ಉಂಟಾದ ಗೋಜಲಿಂದ ಪುರುಷರು ದೋಷಮುಕ್ತರಾದ ಮೇಲೂ ಸಹ ಕಷ್ಟ ಅನುಭವಿಸಬೇಕಾಗಬಹುದು, ಖುಲಾಸೆಯನ್ನು ಗಮನಿಸದೇ ಇರಬಹುದು. ಅತ್ಯಾಚಾರ ಅರೋಪದ ಕಳಂಕದಿಂದ ನೋವು ಮುಂದೆ ಸಹ ಅನುಭವಿಸಬಹುದು. ಅವರ ಘನತೆ ಪುನಃಸ್ಥಾಪಿಸಲು ಗೌರವ ಅಥವಾ ಅವಮಾನ , ದುಃಖ ಮತ್ತು ಯಾತನೆ ಸರಿದೂಗಿಸಲು ಸಾಧ್ಯವಾದದೇ ಇರಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.