ಶಿವಮೊಗ್ಗ : ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿನಿ ನಂದಿತಾ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.
ನ.6ರಂದು ತೀರ್ಥಹಳ್ಳಿಯ ಮಾರಿಕಾಂಬ ದೇವಾಲಯಕ್ಕೆ ಭೇಟಿ ನೀಡಿ, ಹುಂಡಿಗೆ 1001ರೂಪಾಯಿ ಹಾಕುವ ಮೂಲಕ ದೇವರ ಮೇಲೆ ಪ್ರಮಾಣ ಮಾಡಿರುವ ಸಚಿವರು, ನಂದಿತಾ ನಿಗೂಢ ಸಾವಿನ ಪ್ರಕರಣದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಪ್ಪು ಮಾಡಿದವರು ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳಲಿ ಎಂದು ಕಿಮ್ಮನೆ ರತ್ನಾಕರ ಹೇಳಿದ್ದಾರೆ.
ನಂದಿತಾ ಅತ್ಯಾಚಾರ ಪ್ರಕರಣದಲ್ಲಿ ಸಚಿವ ಕಿಮ್ಮನೆ ರತ್ನಾಕರ ಅವರು ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಾರಿಕಾಂಬ ದೇವಾಲಯದಲ್ಲಿ ಪ್ರಮಾಣ ಮಾಡಿರುವ ಕಿಮ್ಮನೆ ರತ್ನಾಕರ್ ಪ್ರಕರಣದಲ್ಲಿ ನಾನು ರಾಜಕೀಯ ಮಾಡುತ್ತೇನೆ ಎಂದು ಆರೋಪ ಮಾಡುವ ಬಿಜೆಪಿಯವರು ನಿಷ್ಪಕ್ಷಪಾತದಿಂದ ನಡೆದುಕೊಳ್ಳುತ್ತಿದ್ದಾರೆ ಎನ್ನುವುದಾದರೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಅತ್ಯಾಚಾರ ಖಂಡಿಸಿ ಬೆಂಗಳೂರಿನಲ್ಲಿ ಬುಧವಾರ ಬಿಜೆಪಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ನಂದಿತಾ ಸಾವು ಪ್ರಕರಣದಲ್ಲಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಗಳನ್ನು ರಕ್ಷಿಸಲು ನಕಲಿ ಡೆತ್ ನೋಟ್ ಸೃಷ್ಟಿ ಮಾಡಿದ್ದಾರೆ. ಈ ಮೂಲಕ ತನಿಖೆ ದಿಕ್ಕು ತಪ್ಪಿಸುತ್ತಿದ್ದಾರೆ. ನೀವು ಪ್ರಮಾಣಿಕರಾದರೆ ನ್ಯಾಯಯುತ ತನಿಖೆ ನಡೆಸಿ ಎಂದು ಕಿಮ್ಮನೆ ವಿರುದ್ಧ ಆರೋಪ ಮಾಡಿದ್ದರು. ಈ ಆರೋಪವನ್ನು ಸಚಿವರು ತಳ್ಳಿ ಹಾಕಿದ್ದಾರೆ.