ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ದಟ್ಟವಾಗಿದ್ದು, ರಕ್ಷಣಾ ಖಾತೆಗೆ ಹೊಸ ಸಚಿವರ ನೇಮಕವಾಗಲಿದೆ.
ಪ್ರಸ್ತುತ ವಿತ್ತ ಸಚಿವ ಅರುಣ್ ಜೇಟ್ಲಿ ಅವರೇ ರಕ್ಷಣಾ ಖಾತೆಯನ್ನೂ ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರನ್ನು ನೂತನ ರಕ್ಷಣಾ ಖಾತೆ ಸಚಿವರನ್ನಾಗಿ ನೇಮಿಸಲು ಪ್ರಧಾನಿ ಮೋದಿ ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಮೋದಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಮೊದಲೇ, ಅಂದರೆ, ನ.8 ಅಥವಾ 9 ರಂದು ಮೋದಿ ತಮ್ಮ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಎರಡೆರೆಡು ಮಹತ್ವದ ಖಾತೆಗಳನ್ನು ಹೊಂದಿರುವ ಜೇಟ್ಲಿಗೆ ಒಂದು ರೀತಿಯಲ್ಲಿ ಹೊರೆಯಾಗಿದೆ. ಅಲ್ಲದೇ, ಇತ್ತೀಚೆಗಷ್ಟೇ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಜೇಟ್ಲಿಗೆ ಒಂದು ಖಾತೆಯಿಂದ ಮುಕ್ತಿನೀಡಲು ಪ್ರಧಾನಿ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಬ್ಬ ಸಮರ್ಥ ವ್ಯಕ್ತಿಯನ್ನು ರಕ್ಷಣಾ ಖಾತೆಗೆ ನೀಡಲು ಮೋದಿ ಚಿಂತನೆ ನಡೆಸಿದ್ದಾರೆ. ಹಾಗಾಗಿ ಗೋವಾದ ಮುಖ್ಯಮಂತ್ರಿ ಪಾರಿಕ್ಕರ್ ಅವರನ್ನು ರಾಷ್ಟ್ರ ರಾಜಕೀಯಕ್ಕೆ ಕರೆತರಲು ಮೋದಿ ಉತ್ಸುಕರಾಗಿದ್ದಾರೆ. ಈ ಬೆಳವಣಿಗೆಗೆ ಪೂರಕವಾಗಿ ನರೇಂದ್ರ ಮೋದಿ ಮನೋಹರ್ ಪಾರಿಕ್ಕರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಪಾರಿಕ್ಕರ್ ಗೋವಾ ಸಿಎಂ ಆಗಿ ಉತ್ತಮ ಆಡಳಿತ ನೀಡಿದವರು ಮಾತ್ರವಲ್ಲದೇ, ಮೋದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಜೇಟ್ಲಿ ಬಳಿ ಇರುವ ಹೆಚ್ಚುವರಿ ಖಾತೆಯನ್ನು ಸಮರ್ಥ ವ್ಯಕ್ತಿಗೆ ನೀಡಲು ಮೋದಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಜಾರ್ಖಂಡ್ ಚುನಾವಣೆ ಹತ್ತಿರದಲ್ಲೇ ಇರುವುದರಿಂದ ಯಶ್ವಂತ್ ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾ, ಹಂಸರಾಜ್ ಅಹಿರ್, ಮುಕ್ತಾರ್ ಅಬ್ಬಾಸ್ ನಖ್ವಿ, ರಾಜೀವ್ ಪ್ರತಾಪ್ ರೂಡಿ ಅವರೂ ಮೋದಿ ಸಚಿವ ಸಂಪುಟ ಸೇರುವ ಸಾಧ್ಯತೆ ಇದೆ. ಇನ್ನು ಸಚಿವರಾದ ಪ್ರಕಾಶ್ ಜಾವ್ಡೇಕರ್, ನಿರ್ಮಲಾ ಸೀತಾರಾಮನ್ ಅವರಿಗೆ ಉನ್ನತ ಖಾತೆಗಳು ಸಿಗುವ ಸಾಧ್ಯತೆ ಇದೆ.
ಅಲ್ಪಸಂಖ್ಯಾತ ಖಾತೆ ಸಚಿವೆ ನಜ್ಮಾ ಹೆಫ್ತುಲ್ಲ ಅವರ ಕಾರ್ಯಕ್ಷಮತೆ ಬಗ್ಗೆ ಪ್ರಧಾನಿ ಮೋದಿ ಅತೃಪ್ತರಾಗಿದ್ದು, ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಅಪಘಾತದಲ್ಲಿ ನಿಧನರಾದ ಸಚಿವ ಗೋಪಿನಾಥ್ ಮುಂಡೆ ಅವರ ಪರಿಸರ ಖಾತೆ ಸಧ್ಯಕ್ಕೆ ಜಾವ್ಡೆಕರ್ ಅವರ ಬಳಿಯಿದ್ದು, ಅದಕ್ಕೆ ಬೇರೆಯವರನ್ನು ನೇಮಿಸಲಾಗುವುದು.