ನವದೆಹಲಿ : ರಾಜಕೀಯ ವ್ಯಕ್ತಿಗಳು ತಮ್ಮ ನಾಯಕರ ಗಮನ ಸೆಳೆಯಲು ಅತಿಯಾಗಿ ಹೊಗಳುವುದನ್ನು ಕಂಡಿದ್ದೇವೆ. ಆದರೆ ರಾಜಕಾರಣಿಗಳ ಬಗ್ಗೆ ಅಂತಹದ್ದೇ ವಿಶಿಷ್ಠ ಹೊಗಳಿಗೆ ದೇಶದ ಹಿರಿಯ ಶಿಕ್ಷಣ ತಜ್ನರಿಂದ ಬಂದರೆ ಹೇಗಿರುತ್ತದೆ? ಅದರಲ್ಲಿಯೂ ಒಂದು ಕಾಲದ ಕಟ್ಟಾ ಕಾಂಗ್ರೆಸ್ಸಿಗ ಪ್ರಧಾನಿ ಮೋದಿ ಅವರನ್ನು ದೇವರ ಅವತಾರವೆಂದು ಹೇಳಿದರೆ?
ದೇಶದ ಹಿರಿಯ ಶಿಕ್ಷಣ ತಜ್ನರಾದ, ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ(ಐ.ಸಿ.ಸಿ.ಆರ್) ಹಾಲಿ ಮುಖ್ಯಸ್ಥ ಲೋಕೇಶ್ ಚಂದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರ ಅವತಾರವೆಂದೇ ಬಣ್ಣಿಸಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿರುವ ಲೋಕೇಶ್ ಚಂದ್ರ, ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತಾ, ಅವರು(ಮೋದಿ) ಅಮೆರಿಕಾ ಪ್ರವಾಸದಲ್ಲಿದ್ದರೂ ನವರಾತ್ರಿ ಸಂದರ್ಭದಲ್ಲಿ 9ದಿನ ಉಪವಾಸವಿದ್ದು ಕೆಲಸ ಮಾಡಿದ್ದರು. ಅವರು ದೇವರ ಅವತಾರವೇ ಸರಿ(bhagwan ke avtar hain) ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಿದ್ಧಾಂತಗಳಿಗಿಂತ ವಿಚಾರಧಾರೆಗಳಿಗೆ ಹೆಚ್ಚು ಮಹತ್ವ ನೀಡುವ ವ್ಯಕ್ತಿಯಾಗಿದ್ದಾರೆ. ಒಂದರ್ಥದಲ್ಲಿ ಪ್ರಧಾನಿ ಮೋದಿ, ಮಹಾತ್ಮಾ ಗಾಂಧಿ ಅವರನ್ನೂ ಮೀರಿಸುತ್ತಾರೆ ಎಂದು ಲೋಕೇಶ್ ಚಂದ್ರ ಅಭಿಪ್ರಾಯಪಟ್ಟಿದ್ದಾರೆ.
"ನಾನು ನನ್ನ ಈ ವರೆಗಿನ ಜೀವನ ಪರ್ಯಂತ ಕಾಂಗ್ರೆಸ್ಸಿಗನಾಗಿದ್ದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೆ. ವಿದೇಶಗಳಲ್ಲಿ ಅನೇಕ ರಾಜಕೀಯ ಗಣ್ಯ ವ್ಯಕ್ತಿಗಳನ್ನು ಹತ್ತಿರದಿಂದ ಬಲ್ಲೆ. ಆದರೆ ಅವರೆಲ್ಲರನ್ನೂ ಹೋಲಿಸಿದರೆ ನರೇಂದ್ರ ಮೋದಿ ಅವರು ವಿಶಿಷ್ಠ ನಾಯಕರಾಗಿದ್ದಾರೆ. ಅವರಿಗೆ ರಾಜಕೀಯ ಎಂಬುದು ಚುನಾವಣೆ ವರೆಗೆ ಮಾತ್ರ, ಚುನಾವಣೆ ಮುಗಿದ ಬೆನ್ನಲ್ಲೇ ಆತ ರಾಜಕೀಯವನ್ನು ಬಿಟ್ಟು ದೇಶದ ಬಗ್ಗೆ ಗಮನ ಕೇಂದ್ರೀಕರಿಸುತ್ತಾರೆ" ಎಂದು ಲೋಕೇಶ್ ಚಂದ್ರ ಮೋದಿ ಅವರನ್ನು ಹೊಗಳಿದ್ದಾರೆ.
ಕೆಲವೊಂದು ವಿಷಯದಲ್ಲಿ ನಮ್ಮ ಪ್ರಧಾನಿ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರನ್ನೂ ಮೀರಿಸುತ್ತಾರೆ ಎಂದು ಹಿರಿಯ ಶಿಕ್ಷಣ ತಜ್ನರು ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಲೋಕೇಶ್ ಚಂದ್ರ ಅವರ ಸಾಧನೆ ಗುರುತಿಸಿ 2006ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅ.30ರಂದು ಅವರನ್ನು ಐಸಿಸಿಆರ್ ನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಸಂಸ್ಕೃತ, ಪರ್ಷಿಯನ್, ಜಾಪನೀಸ್,ಚೀನಿ, ಮಂಗೋಲಿಯನ್ ಇಂಡೋನೇಷಿಯನ್ ಗ್ರೀಕ್ ಲ್ಯಾಟೀನ್ ಜರ್ಮನ್ ಸೇರಿದಂತೆ ವಿಶ್ವದ 16 ಭಾಷೆಗಳಲ್ಲಿ ಲೋಕೇಶ್ ಚಂದ್ರ ಅವರು ಪ್ರಭುತ್ವ ಹೊಂದಿದ್ದಾರೆ.