ಮುಂಬೈ : ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವೆ ಮತ್ತೆ ಬಿಕ್ಕಟ್ಟು ಉಂಟಾಗಿದೆ. ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದೇವೇಂದ್ರ ಫಡ್ನವೀಸ್ ಗೆ ಶಿವಸೇನೆ ಎಚ್ಚರಿಕೆ ನೀಡಿದ್ದು ರಾಜ್ಯದ ಜನತೆಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಹೇಳಿದೆ.
ಸಾಮ್ನಾ ಸಂಪಾದಕೀಯದ ಮೂಲಕ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಶಿವಸೇನೆ, ಹೊಸ ಸರ್ಕಾರವೆಂಬುದು ಹೊಸದಾಗಿ ಮದುವೆಯಾದ ಮಹಿಳೆಯಿದ್ದಂತೆ, ಪ್ರಾರಂಭದ ದಿನಗಳಲ್ಲಿ ಅತ್ತೆಯನ್ನು ಮೆಚ್ಚಿಸುವ ಕೆಲಸ ಮಾಡುತ್ತಾರೆ. ಹಾಗೆಯೇ ಹೊಸ ಸರ್ಕಾರ ಆರಂಭದ ದಿನಗಳಲ್ಲಿ ಜನರನ್ನು ಮೆಚ್ಚಿಸುವ ಕೆಲಸ ಮಾಡುತ್ತದೆ. ಆದರೆ ಬಿಜೆಪಿ ಸರ್ಕಾರ ಎಂದಿಗೂ ಜನರನ್ನು ಲಘುವಾಗಿ ಪರಿಗಣಿಸಬಾರದು. ಒಂದು ವೇಳೆ ಲಘುವಾಗಿ ತೆಗೆದುಕೊಂಡಲ್ಲಿ ಸರ್ಕಾರ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಇದೇ ವೇಳೆ ಮೈತ್ರಿ ಬಗ್ಗೆ ಬಿಜೆಪಿ ಸ್ಪಷ್ಟ ನಿಲುವು ತಳೆಯಬೇಕು, ಸರ್ಕಾರ ವಿಶ್ವಾಸಮತ ಸಾಬೀತುಪಡಿಸುವುದರೊಳಗೆ ಮೈತ್ರಿ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಬೇಕು, ಇಲ್ಲದೇ ಇದ್ದಲ್ಲಿ ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಮತ ಚಲಾಯಿಸುವುದಾಗಿ ಶಿವಸೇನೆ ಹೇಳಿದೆ.
ಅ.31ರಂದು ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ-ಶಿವಸೇನೆ ನಡುವಿನ ಭಿನ್ನಾಭಿಪ್ರಾಯ ಕೊನೆಗೊಂಡಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಸರ್ಕಾರ ಅಸ್ಥಿತ್ವಕ್ಕೆ ಬಂದ 24 ಗಂಟೆಗಳಲ್ಲೇ ಶಿವಸೇನೆ ನೂತನ ಮುಖ್ಯಮಂತ್ರಿಯ ಕಿವಿ ಹಿಂಡಲು ಮುಂದಾಗಿದೆ.