ನವದೆಹಲಿ : 'ಯೋಜನೇತರ ವೆಚ್ಚ'ಗಳನ್ನು ಶೇ.10ರಷ್ಟು ಕಡಿಮೆ ಮಾಡಲು ಕಠಿಣ ಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಸರ್ಕಾರಿ ಅಧಿಕಾರಿಗಳು ವಿದೇಶಗಳಿಗೆ ಭೇಟಿ ನೀಡುವಾಗ ಪ್ರಥಮ ದರ್ಜೆ ಪ್ರಯಾಣ ಮಾಡುವುದಕ್ಕೆ ಕಡಿವಾಣ ಹಾಕಿದೆ.
2014-15ನೇ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ಶೇ.4.1ಕ್ಕೆ ಇಳಿಸುವ ಗುರಿ ಹೊಂದಿರುವ ಹಣಕಾಸು ಸಚಿವಾಲಯ, ಬಿಳಿ ಆನೆಗಳೆಂದೇ ಗುರುತಿಸಲ್ಪಡುವ ಸರ್ಕಾರಿ ಅಧಿಕಾರಿಗಳ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ನಿರ್ಧರಿಸಿದೆ. ಇದರ ಭಾಗವಾಗಿ ಸರ್ಕಾರಿ ಅಧಿಕಾರಿಗಳು ವಿದೇಶಗಳಿಗೆ ಭೇಟಿ ನೀಡುವಾಗ ಪ್ರಥಮ ದರ್ಜೆ ಪ್ರಯಾಣ ಮಾಡಬಾರದು, ಪಂಚತಾರಾ ಹೊಟೇಲ್ ಗಳಲ್ಲಿ ಸಭೆಗಳನ್ನು ನಡೆಸಬಾರದೆಂದು ಆದೇಶ ಹೊರಡಿಸಿದೆ.
ಹೊಸ ನೀತಿಯಿಂದ, ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು ಕೆಲಸದ ನಿಮಿತ್ತ ವಿದೇಶಗಳಿಗೆ ಅಥವಾ ದೇಶದಲ್ಲೇ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಥಮ ದರ್ಜೆ ಪ್ರಯಾಣಕ್ಕಿಂತ ಸಾಮಾನ್ಯ ದರ್ಜೆ ಪ್ರಯಾಣ ನಡೆಸಬೇಕಾಗುತ್ತದೆ. ಇನ್ನು ಪಂಚತಾರಾ ಹೊಟೇಲ್ ಗಳಲ್ಲಿ ಸಭೆ ನಡೆಸುವುದಕ್ಕಿಂತಲೂ ಅನುದಾನ ಉಳಿತಾಯ ಮಾಡುವ ಉದ್ದೇಶದಿಂದ ವಿಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ರಕ್ಷಣಾ ಪಡೆಗಳಿಗೆ ಅಗತ್ಯವಿರುವ ವಾಹನ ಖರೀದಿಸುವುದನ್ನು ಹೊರತುಪಡಿಸಿದರೆ ಅಧಿಕಾರಿಗಳಿಗಾಗಿ ವಾಹನಗಳನ್ನು ಖರೀದಿಸುವುದಕ್ಕೂ ಸಹ ಮೋದಿ ಸರ್ಕಾರ ಕತ್ತರಿ ಪ್ರಯೋಗ ಮಾಡಿದೆ. 2016-17 ನೇ ಸಾಲಿನ ವೇಳೆಗೆ ವಿತ್ತೀಯ ಕೊರತೆಯನ್ನು ಶೇ.3ಕ್ಕೆ ಇಳಿಸಬೇಕೆಂಬುದು ಕೇಂದ್ರ ಸರ್ಕಾರದ ಗುರಿ. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಅನಗತ್ಯ ಖರ್ಚುಗಳಿಗೆ ಕತ್ತರಿ ಪ್ರಯೋಗ ಮಾಡುತ್ತಿದೆ.
ಪ್ರಧಾನಿಯಾದ ಬೆನ್ನಲ್ಲೇ ಇಲಾಖೆಗಳನ್ನು ವಿಲೀನಗೊಳಿಸುವ ಮೂಲಕ ಅನಗತ್ಯ ಖರ್ಚುಗಳಿಗೆ ಮೋದಿ ಕಡಿವಾಣ ಹಾಕಿದ್ದರು.