ಅರುಣಾಚಲ ಪ್ರದೇಶ : 'ಅರುಣಾಚಲ ಪ್ರದೇಶ'ದಲ್ಲಿ 54 ಹೊಸ ಬಾರ್ಡರ್ ಪೋಸ್ಟ್ ಗಳನ್ನು ನಿರ್ಮಿಸುವ ಭಾರತ ಸರ್ಕಾರದ ಘೋಷಣೆಗೆ ಕೆಂಡಾಮಂಡಲವಾಗಿರುವ ಚೀನಾ, ಗಡಿ ವಿವಾದವನ್ನು ಉಲ್ಬಣವಾಗುವ ಯಾವುದೇ ನಿರ್ಧಾರಗಳನ್ನು ಕೈಗೊಳ್ಳದೇ ಇರಲು ಎಚ್ಚರಿಕೆ ನೀಡಿದೆ.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ನಿಲುವು ಸ್ಪಷ್ಟವಾಗಿದೆ. ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಚೀನಾ ಸಿದ್ಧವಾಗಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಭಾರತ ಸರ್ಕಾರ ಮಾತುಕತೆಗೂ ಮುನ್ನ ಗಡಿ ವಿವಾದ ಉಲ್ಬಣಿಸಲು ಕಾರಣವಾಗುವ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಚೀನಾ ಸರ್ಕಾರ ಎಚ್ಚರಿಸಿದೆ. ಭಾರತಕ್ಕೆ ಎಚ್ಚರಿಕೆ ನೀಡಿರುವ ಚೀನಾ, ಅದೇ ಅರುಣಾಚಲ ಪ್ರದೇಶ ಭಾಗದಲ್ಲಿ ತನ್ನ ಪೀಪಲ್ಸ್ ಲಿಬರೇಷನ್ ಆರ್ಮಿ ಸೈನಿಕರ ಮೂಲಕ 4,057 ಕಿ.ಮಿ ರಸ್ತೆ ನಿರ್ಮಿಸಲು ಯತ್ನಿಸಿತ್ತು. ಆದರೆ ಚೀನಾ ಸೈನಿಕರು ರಸ್ತೆ ನಿರ್ಮಾಣ ಮಾಡದಂತೆ ತಡೆಗಟ್ಟುವಲ್ಲಿ ಭಾರತೀಯ ಸೈನಿಕರು ಯಶಸ್ವಿಯಾಗಿದ್ದಾರೆ.
ಭಾರತದ ಗಡಿ ಪ್ರದೇಶದಲ್ಲಿರುವ ಅರುಣಾಚಲ ಪ್ರದೇಶವನ್ನು ಚೀನಾ, ದಕ್ಷಿಣ ಟಿಬೇಟ್ ಎಂದೇ ಭಾವಿಸಿದೆ. ಅರುಣಾಚಲ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುವುದು, ಬಾರ್ಡರ್ ಪೋಸ್ಟ್ ಗಳನ್ನು ನಿರ್ಮಿಸುವುದೂ ಸೇರಿದಂತೆ ಭಾರತ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಕುಪಿತಗೊಂಡಿರುವ ಚೀನಾ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ನಡುವೆ ಇನ್ನೂ ಮಾತುಕತೆ ಮುಂದುವರೆದಿದೆ, ಈ ಸಂದರ್ಭದಲ್ಲಿ ಭಾರತ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಸರಿಯಲ್ಲ ಎಂದು ಈ ಹಿಂದೆಯೂ ಎಚ್ಚರಿಕೆ ನೀಡಿತ್ತು. ಚೀನಾ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ರಾಜನಾಥ್ ಸಿಂಗ್, ಭಾರತಕ್ಕೆ ಚೀನಾ ಎಚ್ಚರಿಕೆ ನೀಡುವುದು ಸರಿಯಲ್ಲ, ಯಾರ ಎಚ್ಚರಿಕೆಗೂ ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದರು.