ನವದೆಹಲಿ : ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣ ಇಟ್ಟಿರುವ ಮೂವರು ಖಾತೆದಾರರ ಹೆಸರು ಬಹಿರಂಗವಾದ ಬೆನ್ನಲ್ಲೇ ವಿದೇಶಿ ಬ್ಯಾಂಕ್ ಗಳಲ್ಲಿ ಕಪ್ಪುಹಣ ಹೊಂದಿರುವ ಕಾಂಗ್ರೆಸ್ಸಿನ ನಾಲ್ವರು ನಾಯಕರ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ತನಿಖೆ ನಡೆಸುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಈ ನಾಲ್ವರ ಪೈಕಿ ಇಬ್ಬರು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಖಾತೆ ರಾಜ್ಯ ಖಾತೆ ಸಚಿವೆಯಾಗಿದ್ದ ಪ್ರಣೀತ್ ಕೌರ್ ಎಂದು ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಇನ್ನೊಬ್ಬರು ಉತ್ತರ ಪ್ರದೇಶದ ಮಾಜಿ ಸಂಸದ ಮಾಹಾರಾಷ್ಟ್ರದ ಪ್ರಮುಖ ರಾಜಕೀಯ ಕುಟುಂಬವೊಂದಕ್ಕೆ ಸೇರಿದ ಇಬ್ಬರು ವ್ಯಕ್ತಿಗಳಿಗೆ ತನಿಖೆಯ ಒಂದು ಭಾಗವಾಗಿ ಕೇಂದ್ರ ಸರ್ಕಾರ ನೋಟಿಸ್ ಜಾರಿಮಾಡಲಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಣಿತ್ ಕೌರ್, ತಾವು ಯಾವುದೇ ವಿದೇಶಿ ಬ್ಯಾಂಕ್ ಖಾತೆ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣ ಇಟ್ಟಿರುವ ಕೆಲ ಉದ್ಯಮಿಗಳು ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಚುನಾವಣಾ ದೇಣಿಗೆ ನೀಡಿರುವ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ
ಪ್ರಜಾಸತ್ತೆ ಸುಧಾರಣಾ ಸಂಸ್ಥೆ ಮಾಹಿತಿ ಪ್ರಕಾರ ಟಿಂಬ್ಲೋ ಕಂಪನಿ 9 ಸಲ ಒಟ್ಟು 1.18ಕೋಟಿ ರೂ.ಗಳನ್ನು ಬಿಜೆಪಿಗೆ ಹಾಗೂ 3ಸಲ ಒಟ್ಟು 65 ಲಕ್ಷ ರೂ.ಗಳನ್ನು ಕಾಂಗ್ರೆಸ್ ಗೆ ನೀಡಿದೆ. ಲೋಧಿಯಾ ಕಂಪನಿ 51 ಸಾವಿರ ರೂ.ಗಳನ್ನು ಬಿಜೆಪಿಗೆ ನೀಡಿತ್ತು. 2004-05 ಮತ್ತು 2011-12ರ ಮಧ್ಯೆ ಈ ಹಣ ನೀಡಲಾಗಿತ್ತು.
ಈ ಎರಡೂ ಕಂಪನಿಗಳ ಹೆಸರು ಕೇಂದ್ರ ಸರ್ಕಾರ ಈಗ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಕಪ್ಪುಹಣ ಖಾತೆದಾರರ ಅಫಿಡವಿಟ್ ನಲ್ಲಿದೆ.