ನವದೆಹಲಿ : 'ದೆಹಲಿ'ಯಲ್ಲಿ ಮತ್ತೆ ಸರ್ಕಾರ ರಚನೆ ಕಸರತ್ತು ನಡೆಯಲಿದೆ. ಅತಂತ್ರ ರಾಜಕೀಯ ಸ್ಥಿತಿ ಎದುರಿಸುತ್ತಿರುವ ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವಂತೆ ಲೆಫ್ಟಿನೆಂಟ್ ಗೌರ್ನರ್ ಬಿಜೆಪಿಯನ್ನು ಆಹ್ವಾನಿಸಲಿದ್ದಾರೆ.
ಉನ್ನತ ಮೂಲಗಳ ಪ್ರಕಾರ, ಲೆಫ್ಟಿನೆಂಟ್ ಗೌರ್ನರ್ ನಜೀಬ್ ಜಂಗ್, ಬಹುಮತವಿಲ್ಲದಿದ್ದರೂ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರ್ಕಾರ ರಚನೆ ಮಾಡುವಂತೆ ಆಹ್ವಾನ ನೀಡಲಿದ್ದಾರೆ. ಪ್ರಸ್ತುತ ನಜೀಂ ಜಂಗ್ ಅವರು ದೆಹಲಿಯಲ್ಲಿ ಇಲ್ಲದ ಕಾರಣ ಅ.28ರ ನಂತರ ಯಾವುದೇ ಕ್ಷಣದಲ್ಲಿಯೂ ಬಿಜೆಪಿ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವ ಸಂಬಂಧ ಲೆಫ್ಟಿನೆಂಟ್ ಗೌರ್ನರ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಈ ಹಿಂದೆಯೂ ಬಿಜೆಪಿ ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಯತ್ನಿಸಿತ್ತು.
ಏತನ್ಮಧ್ಯೆ ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿರುವುದರಿಂದ ದೆಹಲಿಯಲ್ಲೂ ವಿಧಾನಸಭಾ ಚುನಾವಣೆ ಎದುರಿಸಲಿ ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬಿಜೆಪಿಗೆ ಸವಾಲು ಹಾಕಿದ್ದಾರೆ.