ನವದೆಹಲಿ : ಅಧಿಕಾರಕ್ಕೆ ಬರುವ ಮುನ್ನ ಸರ್ಕಾರಿ ಬಂಗಲೆ, ಭದ್ರತೆ ಇತರ ಸೌಲಭ್ಯಗಳನ್ನು ತಿರಸ್ಕರಿಸುತ್ತೇನೆ, ಸಾಮಾನ್ಯನಂತೆ ಅಧಿಕಾರ ನಡೆಸುತ್ತೇನೆ ಎಂದು ಹೇಳಿದವರನ್ನು ನೋಡಿದ್ದೇವೆ. ಆದರೆ ಅಧಿಕಾರಕ್ಕೂ ಮುನ್ನ ಯಾವುದೇ ಆಶ್ವಾಸನೆ ನೀಡದೇ ಅಧಿಕಾರ ದೊರೆತ ಬಳಿಕ ಸಾಮಾನ್ಯ ವ್ಯಕ್ತಿಯಂತೆ ಇರುವವರಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ.
ಆದರೆ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕವೂ ಸರಳವಾಗಿಯೇ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಏಮ್ಸ್ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ತಮ್ಮ ನಿವಾಸದಿಂದ ತೆರಳಿದ್ದ ಪ್ರಧಾನಿ ಮೋದಿ, ಸಂಚಾರ ವ್ಯವಸ್ಥೆಯನ್ನು ವ್ಯತ್ಯಯ ಮಾಡಿಸದೇ ಸಾಮಾನ್ಯ ಜನರಂತೆಯೇ ಘಟಿಕೋತ್ಸವದ ಸ್ಥಳಕ್ಕೆ ತೆರಳಿದ್ದಾರೆ. ಸಾಮಾನ್ಯವಾಗಿ ಪ್ರಧಾನಿ, ಮುಖ್ಯಮಂತ್ರಿಗಳು ತೆರಳುವ ಮಾರ್ಗದಲ್ಲಿ ಸಂಚಾರ ನಿರ್ಬಂಧ ಹೇರುವುದು, ಸಂಚಾರ ವ್ಯವಸ್ಥೆಯನ್ನು ವ್ಯತ್ಯಯ ಮಾಡುವುದು ರೂಢಿ. ಆದರೆ ಏಮ್ಸ್ ಘಟಿಕೋತ್ಸವದ ಸಂದರ್ಭದಲ್ಲಿ ದೆಹಲಿ ಜನತೆಗೆ ಎಲ್ಲಿಯೂ ಸಂಚಾರ ವ್ಯತ್ಯಯ ಉಂಟಾಗದಂತೆ ಪ್ರಧಾನಿ ಮೋದಿ ಎಚ್ಚರ ವಹಿಸಿದ್ದರು.
ಈ ಹಿಂದೆ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಗಂಟೆಗಟ್ಟಲೆ ಸಂಚಾರ ನಿರ್ಬಂಧ ಹೇರುತ್ತಿದ್ದರಿಂದ ದೆಹಲಿಯ ಜನತೆ ಪೊಲೀಸರಿಗೆ ಹಿಡಿಶಾಪ ಹಾಕುತ್ತಿದ್ದರು. ಆದರೆ ಮೋದಿ ಪ್ರಧಾನಿಯಾದಾಗಿನಿಂದ ಸಂಚಾರಿ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೋದಿ ತಾವು ಸಂಚರಿಸುವ ಮಾರ್ಗದಲ್ಲಿ ಸಂಚಾರ ನಿರ್ಬಂಧ ಹೇರುವ ಬದಲು ಪ್ರಧಾನಿ ವಾಹನದಿಂದ 100 ಮಿ.ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಲಾಗುತ್ತದೆ. ಇದೇ ಸಂಚಾರದ ವೇಳೆ ಪ್ರಧಾನಿಯ ಸುರಕ್ಷತೆಗೆ ಕೈಗೊಂಡಿರುವ ಹೊಸ ಮಾರ್ಗವೂ ಆಗಿದೆ. ಅಲ್ಲದೇ ಅಗತ್ಯವಿರುವಷ್ಟು ಮಾತ್ರ ಭದ್ರತಾ ಸಿಬ್ಬಂದಿಗಳನ್ನು ಬಳಸುತ್ತಾರೆ ಎಂಬುದು ಮೋದಿ ಅವರ ಸರಳೆತೆಗೆ ಮತ್ತೊಂದು ಉದಾಹರಣೆಯಾಗಿದೆ.