ನವದೆಹಲಿ : ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಸೋಮವಾರ ಲೋಕಸಭೆಯಲ್ಲಿ 3ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ್ದು, ಈ ಸಲ ಸಣ್ಣ ತೆರಿಗೆದಾರರಿಗೆ ಕೇಂದ್ರ ರಿಲೀಫ್ ನೀಡಿದೆ. ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಬಾಡಿಗೆ ಮನೆಯಲ್ಲಿರುವ ಉದ್ಯೋಗಿಗಳಿಗೆ 24 ಸಾವಿರದಿಂದ 60 ಸಾವಿರ ರೂಪಾಯಿವರೆಗೆ ತೆರಿಗೆ ವಿನಾಯ್ತಿಯನ್ನು ಹೆಚ್ಚಳ ಮಾಡಿದೆ.
2016 ರ ಬಜೆಟ್ ನಲ್ಲಿ ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಮುಂದಿನ 5 ವರ್ಷಗಳಲ್ಲಿ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿ ಹೊಂದಲಾಗಿದೆ. ರೈತರ ಹಿತಕ್ಕಾಗಿ 35,984 ಕೋಟಿ ರೂ ವನ್ನು ತೆಗೆದಿರಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 5 ಲಕ್ಷ ಎಕರೆ ಭೂಮಿಯನ್ನು ಸಾವಯವ ಮಾಡುವ ಯೋಜನೆ ರೂಪಿಸಲಾಗಿದೆ.ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿರುವ ಬೆಳೆ ನಾಶಕ್ಕೆ ಅತ್ಯಲ್ಪ ಪ್ರೀಮಿಯಂಗೆ ಅತ್ಯುನ್ನತ ಪರಿಹಾರ ಘೋಷಿಸಲಾಗಿದೆ.
2016 ರ ಬ್ಬಜೆಟ್ ನಲ್ಲಿ ನೀರಾವರಿ ಯೋಜನೆ ಹೆಚ್ಚಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ನಬಾರ್ಡ್ ಯೋಜನೆಯ ಅಡಿಯಲ್ಲಿ 20,000 ಕೋಟಿ ರೂ ವನ್ನು ನೀರಾವರಿ ನಿಧಿಗಾಗಿ ತೆಗೆದಿರಿಸಲಾಗಿದೆ. ಒಂದು ನಿರ್ದಿಷ್ಟಪಡಿಸಿದ ಅವಧಿಯೊಳಗೆ ಎಲ್ಲಾ ಕಾರ್ಯಕ್ರಮಗಳನ್ನೂ ಪೂರ್ಣಗೊಳಿಸಲು ನಿಶ್ಚಿತ ರೂಪುರೇಷೆ ನೀಡಲಾಗಿದೆ ಮತ್ತು ಹಣವನ್ನು ಮಂಜೂರು ಮಾಡಲಾಗಿದೆ.
ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ರಸ್ತೆಗೆ ಸಾರ್ವಜನಿಕ ಹೂಡಿಕೆಗೆ 2016 ರ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ. ಶೇಕಡಾ ೮೫ ರಷ್ಠು ಸ್ಥಗಿತಗೊಂಡಿದ್ದ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂಚಿಕೆಯನ್ನು 19,000 ಕೋಟಿ ರೂ ಗೆ ಹೆಚ್ಚಿಸಲಾಗಿದೆ. 97,000 ಕೋಟಿ ರೂ ವನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನೂ ಸೇರಿ ಒಟ್ಟು ರಸ್ತೆ ಕಾಮಗಾರಿಗೆ ತೆಗೆದಿರಲಾಗಿದೆ.
ರೈಲ್ವೇ ಕ್ಷೇತ್ರಗಳಿಗೆ 1,21,000 ಕೋಟಿ ರೂ ಅನುದಾನ ನೀಡಲಾಗಿದೆ. ಎಲ್ಲಾ ಕ್ಷೇತ್ರಗಳಿಗಿಂತ ರೈಲ್ವೇಗೆ 2016 ರ ಬಜೆಟ್ ನಲ್ಲಿ ಅತೀ ಹೆಚ್ಚು ನಿಧಿ ಹಂಚಲಾಗಿದೆ.
ಪ್ರತೀ ಕುಟುಂಬಕ್ಕೆ 1 ಲಕ್ಷದವರೆಗೆ ಮತ್ತು ಹಿರಿಯ ನಾಗರಿಕರಿಗೆ ಹೆಚ್ಚುವರಿ 30,000 ರೂ ಆರೋಗ್ಯ ವಿಮೆ ನೀಡಲಾಗುವುದು. ಪ್ರಧಾನ ಮಂತ್ರಿ ಔಷಧ್ ಯೋಜನೆಯಡಿಯಲ್ಲಿ 300 ಹೊಸ ಔಷಥಿ ಅಂಗಡಿಗಳನ್ನು ತೆರೆಯಲಾಗುವುದು.
ಸರ್ಕಾರ ಎಲ್ಲಾ ಹಳ್ಳಿಗಳನ್ನೂ ಮೇ 2018 ರ ಹೊತ್ತಿಗೆ ಶೇಕಡಾ 100 ರಷ್ಠು ವಿದ್ಯುದೀಕರಣ ಗೊಳಿಸುವ ಭರವಸೆ ನೀಡಿದೆ. ಇದರಲ್ಲಿ 3ನೇ 1 ರಷ್ಟು ಗುರಿಯನ್ನು ಈಗಾಗಲೇ ತಲುಪಲಾಗಿದೆ.
10 ಸಾರ್ವಜನಿಕ ಮತ್ತು 10 ಖಾಸಗಿ ಸಂಸ್ಥೆಗಳು ವಿಶ್ವದರ್ಜೆಯ ಬೋಧನೆ ಮತ್ತು ಸಂಶೋಧನಾ ಸಂಸ್ಥೆಗಳಾಗಿ ಹೊರಹೊಮ್ಮಲು ಯೋಜನೆ ತಯಾರಿಸಲು ಕರೆ ನೀಡಲಾಗಿದೆ. ಉನ್ನತ ಶಿಕ್ಷಣಕ್ಕಾಗಿ 1000 ಸಾವಿರ ಕೋಟಿ ರೂಪಾಯಿ ನೆರವು ಮತ್ತು ಉನ್ನತ ಶಿಕ್ಷಣಕ್ಕೆ ಏಜೆನ್ಸಿ ಮೂಲಕ ಹಣಕಾಸಿನ ನೆರವು ನೀದಲು ನಿರ್ಧರಿಸಲಾಗಿದೆ. ಮುಂದಿನ 2 ವರ್ಷಗಳಲ್ಲಿ ದೇಶಾದ್ಯಂತ 62 ನೂತನ ನವೋದಯ ವಿದ್ಯಾಲಯಗಳ ಆರಂಭಿಸಲಾಗುವುದು.
ಜಾಗತಿಕ ಆರ್ಥಿಕ ಕುಸಿತ ಹಿನ್ನೆಲೆಯಲ್ಲಿ, ದೇಶದ ಬೆಳವಣಿಗೆಯ ಬಗ್ಗೆ ನಿರಂತರ ಗಮನ ನೀಡಲು ಒಂದು ಸಮಿತಿಯ ರಚನೆ ಮಾಡಲಾಗುವುದು.
ಕೇಂದ್ರ ಸರಬರಾಜು ಮತ್ತು ವಿಲೇವಾರಿ ನಿರ್ದೇಶನಾಲಯದ ಅಡಿಯಲ್ಲಿ ಸರಕುಗಳ ಖರೀದಿಗೆ ತಂತ್ರಜ್ಞಾನವನ್ನು ಉಪಯೋಗಿಸಲಾಗುವುದು.
ಉದ್ಯೋಗ ಖಾತ್ರಿ ಯೋಜನೆಗಾಗಿ 38, 500 ಕೋಟಿ ಮೀಸಲು. ಸ್ವಚ್ಚ ಭಾರತ ಅಭಿಯಾನ ಯೋಜನೆಗೆ 9000 ಸಾವಿರ ಕೋಟಿ. ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಲಿಟ್ರಸಿ ಯೋಜನೆ.