ಮುಂಬೈ : ಮಹರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಇನ್ನಷ್ಟು ವಿಳಂಬವಾಗಿದೆ. ದೀಪಾವಳಿ ಮುಗಿದ ಬಳಿಕ ಸಿಎಂ ಅಭ್ಯರ್ಥಿ ಕುರಿತು ಚರ್ಚೆ ನಡೆಸಲು ನಿರ್ಧರಿಸಲಾಗಿದೆ.
ದೀಪಾವಳಿ ಹಿನ್ನಲೆಯಲ್ಲಿ ಶಾಸಕರು ತಮ್ಮ ತಮ್ಮ ಊರುಗಳಿಗೆ ತೆರಳಿರುವುದರಿಂದ ಹಬ್ಬದ ಬಳಿಕ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಕಾರಣಕ್ಕಾಗಿಯೇ ಇಂದು ರಾಜನಾಥ್ ಸಿಂಗ್ ಹಾಗೂ ಜೆ.ಪಿ.ನಡ್ಡಾ ನೇತೃತ್ವದ ವೀಕ್ಷಕರ ತಂಡ ಮುಂಬೈಗೆ ನೀಡಬೇಕಿದ್ದ ಭೇಟಿ ಕೂಡ ರದ್ದುಗೊಂಡಿದೆ.
ಮಹಾರಾಷ್ಟ್ರದಲ್ಲಿ ಎನ್ ಸಿಪಿ, ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ಶಿವಸೇನೆ ಹಳೆ ದ್ವೇಷ ಮರೆತು ಬಿಜೆಪಿ ಜತೆ ಮುಂದೆ ಸಾಗುವ ಮಾತುಗಳನ್ನಾಡಿದೆ. ಆದರೆ 1995ರ ಸೂತ್ರದಂತೆ ಸಚಿವ ಸ್ಥಾನ ಹಂಚಿಕೆ ಮಾಡಬೇಕು ಎಂಬ ಷರತ್ತನ್ನು ಶಿವಸೇನೆ ಮುಂದಿಟ್ಟಿದೆ. ಆದರೆ ಬಿಜೆಪಿ ಇದನ್ನು ತಿರಸ್ಕರಿಸಿದೆ ಎನ್ನಲಾಗಿದೆ. ಈ ವರದಿಯನ್ನು ಶಿವಸೇನೆ ನಿರಾಕರಿಸಿದೆ.
ಈ ನಡುವೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್ ಹಾಗೂ ಎನ್ ಸಿಪಿ, ಶಿವಸೇನೆಯನ್ನೊಳಗೊಂಡ ಸರ್ಕಾರ ರಚಿವ ಕುರಿತು ಕಾಂಗ್ರೆಸ್ ನಾಯಕರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಎನ್ ಸಿಪಿ ಶಾಸಕಾಂಗ ಪಕ್ಷದ ನಾಯಕ ಅಜಿತ್ ಪವಾರ್ ತಿಳಿಸುವ ಮೂಲಕ ರಾಜಕೀಯ ಸಂಚಲನಕ್ಕೆ ಕಾರಣರಾಗಿದ್ದಾರೆ.
ಬಿಜೆಪಿಗೆ ಬೆಂಬಲ ನೀಡುವ ಕುರಿತು ಶಿವಸೇನೆ ಹಿಂಬಾಗಿಲ ಮಾತುಕತೆ ಆರಂಭಿಸಿದ್ದು, ಪ್ರಮುಖ ಖಾತೆಗಳಾದ ಹಣಕಾಸು, ಗೃಹ, ಲೋಕೋಪಯೋಗಿ ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದೆ ಎನ್ನಲಾಗಿದೆ. ಆದರೆ ಈ ಕುರಿತು ಬಿಜೆಪಿ ಯಾವುದೇ ಪ್ರಕ್ರಿಯೆ ನೀಡದೇ ಕುತೂಹಲ ಕಾಯ್ದಿರಿಸಿದೆ.