ನವದೆಹಲಿ : ಒನ್ ರಾಂಕ್, ಒನ್ ಪೆನ್ಶನ್ ಯೋಜನೆ ಜಾರಿ ವಿಳಂಬವನ್ನು ಖಂಡಿಸಿ ನೂರಾರು ಮಾಜಿ ಸೈನಿಕರು ದೆಹಲಿಯ ಜಂತರ್ ಮಂತರ್ ನಲ್ಲಿ ಸರಣಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಜಂತರ್ ಮಂತರ್ನಲ್ಲಿ ಆರಂಭಿಸಲಾಗಿರುವ ಸರದಿ ಉಪವಾಸ ಸತ್ಯಾಗ್ರಹವನ್ನು ಭಾರತೀಯ ಮಾಜಿ ಸೈನಿಕರ ಆಂದೋಲನ ಸಂಘಟನೆ (ಐಇಎಸ್ಎಂ) ಆಯೋಜಿಸಿದೆ. ಕಳೆದ ವಾರವೇ ಮಾಜಿ ಸೈನಿಕರ ಈ ಸಂಘಟನೆಯು ಸರ್ಕಾರ ಒನ್ ರಾಂಕ್, ಒನ್ ಪೆನ್ಶನ್ ಯೋಜನೆಯನ್ನು ಕೂಡಲೇ ಅನುಷ್ಠಾನಕ್ಕೆ ತರದಿದ್ದಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗುವುದೆಂಬ ಎಚ್ಚರಿಕೆಯನ್ನು ನೀಡಿತ್ತು.
ಈ ನಡುವೆ ಮಾಜಿ ಸೈನಿಕರು ತಮ್ಮ ಬೇಡಿಕೆಯನ್ನುಸರ್ಕಾರ ಕೂಡಲೇ ಪರಿಗಣಿಸಿ ಜಾರಿಗೆ ತರಬೇಕೆಂದು ಒತ್ತಾಯಿಸುವ ಮನವಿಗೆ ರಕ್ತದಲ್ಲಿ ಹಸ್ತಾಕ್ಷರ ಹಾಕಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲಾಗುವುದೆಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಈ ತನಕ ಸಂಘಟನೆಯು ತೆರೆಯ ಮುಂದೆ ಮತ್ತು ಹಿಂದೆ ಮಾಡಿರುವ ಎಲ್ಲ ಮಾತುಕತೆ ಯತ್ನಗಳು ವಿಫಲವಾಗಿವೆ. ಸರ್ಕಾರ ಮಾಜಿ ಸೈನಿಕರ ಈ ಬೇಡಿಕೆಯನ್ನು ಮನ್ನಿಸುವುದಾಗಿ ಹೇಳಿತ್ತಾದರೂ ಅದರ ಈಡೇರಿಕೆಗೆ ಯಾವುದೇ ಕಾಲಮಿತಿಯನ್ನು ಒಪ್ಪಿರಲಿಲ್ಲ.