ಬೆಂಗಳೂರು : 'ಮಹಾರಾಷ್ಟ್ರ' ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಕುಸಿದಿರುವುದು ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಕಾಂಗ್ರೆಸ್ ಬಗ್ಗೆ ಸ್ವಪಕ್ಷೀಯರೇ ತಾತ್ಸಾರ ಮನೋಭಾವನೆ ಹೊಂದುವಂತೆ ಮಾಡಿದೆ.
ಕರ್ನಾಟಕ ರಾಜ್ಯದ ಕಾಂಗ್ರೆಸ್ ಮುಖಂಡರಲ್ಲೂ ಸಹ ಎರಡೂ ರಾಜ್ಯಗಳ ಫಲಿತಾಂಶ ನಿರಾಶೆ ಮೂಡಿಸಿದ್ದು ಹೈಕಮಾಂಡ್ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಸಹ ಕಾಂಗ್ರೆಸ್ ಕಳಪೆ ಸಾಧನೆ ಬಗ್ಗೆ ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು ದೆಹಲಿಯಿಂದ ಕಾರ್ಯನಿರ್ವಹಿಸುವ ಅಸಮರ್ಥ ನಾಯಕರನ್ನು ಕಿತ್ತೊಗೆಯಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿದೆ. ಈ ಸೋಲಿನಿಂದ ಪಕ್ಷ ಪಾಠ ಕಲಿಯಬೇಕಿದೆ. ತಳಮಟ್ಟದಿಂದ ಪಕ್ಷವನ್ನು ಬಲವರ್ಧನೆ ಮಾಡಬೇಕಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಹತಾಶಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು 'ಪ್ರಿಯಾಂಕ ಲಾವೋ ದೇಶ್ ಬಚಾವೋ' ಎಂದು ಘೋಷಣೆ ಕೂಗಿದ್ದರು.