ಶ್ರೀನಗರ : ಪ್ರವಾಹ ಪೀಡಿತ ಜಮ್ಮು-ಕಾಶ್ಮೀರಕ್ಕೆ ಅ.18 ಚುನಾವಣಾ ಅಧಿಕಾರಿಗಳು ಭೇಟಿ ನೀಡಲಿದ್ದು ವಿಧಾನಸಭಾ ಚುನಾವಣೆ ನಡೆಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಜಮ್ಮು-ಕಾಶ್ಮೀರದ ಸರ್ಕಾರದ ಅವಧಿ ಮುಂದಿನ ಜನವರಿಗೆ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ, ಕೇಂದ್ರ ಚುನಾವಣಾ ಆಯೋಗ ಡಿಸೆಂಬರ್ ಒಳಗಾಗಿ ಚುನಾವಣೆ ನಡೆಸಲು ನಿರ್ಧರಿಸಿದೆ. ಆದರೆ ಇತ್ತೀಚೆಗಷ್ಟೇ ಭೀಕರ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು.
ಪರಿಸ್ಥಿತಿ ಸುಧಾರಣೆಯಾಗಿರುವ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೇ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿರುವುದರಿಂದ ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ಆಯೋಗದ ಅಧಿಕಾರಿಗಳು ಭೇಟಿ ನೀಡಲಿದ್ದು, ಇಂದೇ ಚುನಾವಣಾ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಜನವರಿ 19, 2015ಕ್ಕೆ ಜಮ್ಮು-ಕಾಶ್ಮೀರದಲ್ಲಿ ಹೊಸ ಸರ್ಕಾರ ರಚನೆಯಾಗಬೇಕಿದೆ. ಇದಕ್ಕೂ ಮುನ್ನ ಚುನಾವಣೆ ನಡೆಯದೇ ಇದ್ದರೆ ರಾಜ್ಯಪಾಲರ ಆಡಳಿತ ಹೇರುವ ಸಾಧ್ಯತೆ ಇದೆ. ಈ ಸಾಧ್ಯತೆಯನ್ನು ತಡೆಯಲು ಚುನಾವಣಾ ಆಯೋಗ ನಿಗದಿತ ಸಮಯಕ್ಕೆ ಚುನಾವಣೆ ನಡೆಸಲಿದೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದಲ್ಲಿ ಸರ್ಕಾರ ನಿಗದಿತ ಸಮಯಕ್ಕೆ ರಚನೆಯಾಗದೇ ಇದ್ದರೆ 6ತಿಂಗಳ ಕಾಲ ರಾಜ್ಯಪಾಲರ ಆಡಳಿತ ಹೇರಬಹುದಾಗಿದೆ. ನಂತರವೂ ಸರ್ಕಾರ ರಚನೆಯಾಗದೇ ಇದ್ದರೆ ಭಾರತದ ಇತರ ರಾಜ್ಯಗಳಿಗೆ ಅನ್ವಯಿಸುವ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರುವ ಅವಕಾಶವಿದೆ.
ಪ್ರವಾಹ ಉಂಟಾಗಿ ರಾಜ್ಯದಲ್ಲಿ ಸಾಕಷ್ಟು ನಷ್ಟ ಸಂಭವಿಸಿದ್ದರಿಂದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸುವುದು ಕಷ್ಟವಾಗಿತ್ತು. ಆದರೆ ಪ್ರಸ್ತುತ ಜಮ್ಮು-ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ.