ನವದೆಹಲಿ : ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಯುದ್ಧಗಳು ಕಡಿಮೆಯಾಗಲಿದೆ. ಆದರೆ ಶತೃಗಳಿಂದ ದಾಳಿಗೆ ಪ್ರತಿರೋಧವೊಡ್ಡಲು ನಮ್ಮ ಶಕ್ತಿ ಎಂದಿನಂತೆಯೇ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅ.17ರಂದು ಭಾರತದ ಕಮಾಂಡರ್ ಗಳ ಜಂಟಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಂಘಟಿತವಾಗಿ ಕೆಲಸ ಮಾಡುವುದು, ಪರಿವರ್ತನೆ ಹಾಗೂ ಡಿಜಿಟಲ್ ಸಶಸ್ತ್ರ ಪಡೆಯ ಅಗತ್ಯತೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
ಬದಲಾವಣೆಯಾಗುತ್ತಿರುವ ಜಗತ್ತಿನೊಂದಿಗೆ ಮುಂದುವರೆಯಲು ಭಾರತದಲ್ಲಿ ಆರ್ಥಿಕವಾಗಿ, ರಾಜತಾಂತ್ರಿಕ, ಭದ್ರತಾ ನೀತಿಗಳನ್ನು ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಮಗೆ ಸೈಬರ್ ಸುರಕ್ಷತೆ ದೊಡ್ಡ ಸವಾಲೊಡ್ಡಬಹುದಾಗಿದ್ದು, ಇದರಿಂದ ಉಂಟಾಗುವ ಹಾನಿಯನ್ನು ಊಹಿಸುವುದು ಕಷ್ಟ, ತಂತ್ರಜ್ನಾನ ಮುಂದುವರಿದಷ್ಟೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇಂದಿನ ಸೈಬರ್ ಜಗತ್ತಿನಲ್ಲಿ ಅಪಾಯಗಳನ್ನು ಸೃಷ್ಠಿಸುವ ಶತೃ ನಮಗೆ ಕಾಣುವುದಿಲ್ಲ ಈ ಹಿನ್ನೆಲೆಯಲ್ಲಿ ಸೈಬರ್ ಸ್ಪೇಸ್(ಬಾಹ್ಯಾಕಾಶ) ನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಭೂಮಿ, ಜಲಮಾರ್ಗಗಳ ಭದ್ರತೆಯಷ್ಟೇ ಮುಖ್ಯವಾದದ್ದು ಎಂದು ಪ್ರಧಾನಿ ಸಭೆಯಲ್ಲಿ ನೆರೆದಿದ್ದ ಕಮಾಂಡರ್ ಗಳಿಗೆ ಕರೆ ನೀಡಿದ್ದಾರೆ.
ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡಬೇಕಾದರೆ ನಾವು ಡಿಜಿಟಲ್ ಸಶಸ್ತ್ರ ಪಡೆಗೂ ಅಷ್ಟೇ ಮಹತ್ವ ನೀಡಬೇಕಾಗುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.