ನವದೆಹಲಿ : ಬ್ರಿಟೀಷರಿಂದ ಭಾರತಕ್ಕೆ ಪರಿಚಯವಾದ ಪಾಶ್ಚಿಮಾತ್ಯ ಶಿಕ್ಷಣ ಪರಿಕಲ್ಪನೆ ಭಾರತೀಯ ಮೌಲ್ಯ ಮತ್ತು ಸಂಸ್ಕೃತಿಗೆ ತೀವ್ರ ಪೆಟ್ಟು ನೀಡಿದ್ದು, ಪ್ರಸ್ತುತ ನಾವು ಹೊಂದಿರುವ ವ್ಯವಸ್ಥೆ ಶಿಕ್ಷಣದ ಮೂಲ ಆಶಯವನ್ನು ಈಡೇರಿಸುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜೋಧ್ ಪುರದಲ್ಲಿ ಆಯೋಜಿಸಲಾಗಿದ್ದ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್, ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿಯೇ ಶಿಕ್ಷಣದ ಮೂಲ ಆಶಯವಾಗಿದೆ. ಆದರೆ ಪ್ರಸ್ತುತ ನಾವು ಹೊಂದಿರುವ ಶಿಕ್ಷಣ ವ್ಯವಸ್ಥೆಯಿಂದ ಈ ಆಶಯವನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಬ್ರಿಟೀಷರು ಪರಿಚಯಿಸಿದ ಪಾಶ್ಚಿಮಾತ್ಯ ಶಿಕ್ಷಣದ ಪರಿಕಲ್ಪನೆ, ಜಗತ್ತಿನಲ್ಲೇ ಪ್ರಖ್ಯಾತಿ ಗಳಿಸಿದ್ದ ಭಾರತೀಯ ಮೌಲ್ಯ ಹಾಗೂ ಸಂಸ್ಕೃತಿಗಳಿಗೆ ತೀವ್ರವಾಗಿ ಧಕ್ಕೆಯುಂಟುಮಾಡಿದೆ.
ಭಾರತೀಯ ಸಂಸ್ಕೃತಿಗೆ ಬೇರಾವುದೂ ಸಾಟಿಯಿಲ್ಲ. ಭಾರತೀಯ ಸಂಸ್ಕೃತಿ ಭೂಮಿಯಲ್ಲಿರುವ ಪ್ರತಿಯೊಂದು ಚರಾಚರ ವಸ್ತುಗಳ ಬಗ್ಗೆಯೂ ಚಿಂತನೆ ನಡೆಸುವಂತೆ ಪ್ರೇರೇಪಿಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಪ್ರತಿಯೊಬ್ಬರೂ ಅರ್ಹತೆ ಮತ್ತು ಸಾಮರ್ಥ್ಯ ಹೊಂದಿರುತ್ತಾರೆ. ಅವರ ಸಾಮರ್ಥ್ಯ, ಪ್ರತಿಭೆ ಸಾಬೀತುಪಡಿಸಲು ಅವಕಾಶ ನೀಡಬೇಕಿದೆ. ಈ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.