ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ದೇಶದ ಕಾರ್ಮಿಕರ ಅಭಿವೃದ್ಧಿಗಾಗಿ ನೂತನ ಯೋಜನೆ ಜಾರಿಗೆ ತಂದಿದ್ದು, ಶ್ರಮೇವ ಜಯತೆ ಯೋಜನೆಗೆ ಚಾಲನೆ ನೀಡಿದ್ದಾರೆ.
ನವದೆಹಲಿಯ ವಿಜ್ನಾನ ಭವನದಲ್ಲಿ ಶ್ರಮೇವ ಜಯತೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ ನಾವು ಶ್ರಮಿಕರನ್ನು ನೋಡುವ ನೋಟ ಬದಲಿಸಿಕೊಳ್ಳಬೇಕು ಎಂದರು.
ನಮ್ಮ ಎಲ್ಲಾ ಅವಶ್ಯಕತೆಗಳನ್ನು ಶ್ರಮಿಕರು ಪೂರೈಸುತ್ತಾರೆ. ನಾವು ಕಾರ್ಮಿಕರನ್ನು ಗೌರವಿಸುವುದಿಲ್ಲ, ವೈಟ್ ಕಾಲರ್ ಶ್ರೇಷ್ಠ ಎಂಬ ಭಾವನೆ ನಮಗಿದೆ. ಭಾರತೀಯರ ಇಂತಹ ಭಾವನೆ ಮೊದಲು ಬದಲಾಗಬೇಕು. ಕಷ್ಟಪಟ್ಟು ಕೆಲಸ ಮಾಡುವ ಪ್ರತಿಯೊಬ್ಬರನ್ನೂ ಗೌರವಿಸಬೇಕು. ಅದು ನಮ್ಮ ಕರ್ತವ್ಯ. ಎಂದು ತಿಳಿಸಿದರು.
ದೇಶದಲ್ಲಿ ಬದಲಾವಣೆ ಮಾಡುವ ಸಮಯ ಬಂದಿದೆ. ಯುವ ಉದ್ಯೋಗಿಗಳಿಗೆ ಉತ್ಸಾಹ ತುಂಬಬೇಕಾಗಿದೆ. ಶ್ರಮೇವ ಜಯತೆ ಯೋಜನೆ ಈ ಕೆಲಸ ಮಾಡುತ್ತದೆ. ನೌಕರರಿಗಾಗಿ ಶ್ರಮ ಸುವಿಧಾ ಯೋಜನೆ ಮಹತ್ವದ್ದಾಗಿದ್ದು, ಪಿಎಫ್ ಫಲಾನುಭವಿಗಳಿಗಾಗಿ ಸಾಮಾನ್ಯ ಖಾತೆ ಸಂಖ್ಯೆ, ಕಾರ್ಮಿಕರಿಗೆ ರಾಷ್ಟ್ರೀಯ ವಿಮೆ, ಆರೋಗ್ಯ ವಿಮೆ ಸೌಲಭ್ಯ ಸಿಗಲಿದೆ. ಈ ಯೋಜನೆಯಿಂದ ದೇಶದ ಅಭಿವೃದ್ಧಿ ಹೆಚ್ಚಲಿದೆ ಎಂದು ವಿವರಿಸಿದರು.