ಶ್ರೀನಗರ : 'ಜಮ್ಮು-ಕಾಶ್ಮೀರ'ದಲ್ಲಿ ಕಳೆದ 2 ದಶಕಗಳಿಂದ ಉಗ್ರವಾದ ಮಿತಿ ಮೀರಿದೆ. ಭಯೋತ್ಪಾದಕರು ನದಿ ತೀರದ ಪ್ರದೇಶಗಳನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿರುವ ಪರಿಣಾಮ ರಾಜ್ಯದಲ್ಲಿ ಪ್ರವಾಹ ಹೆಚ್ಚುತ್ತಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಅ.14ರಂದು ಜಮ್ಮು ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಂಗ್, ಕಳೆದ 25 ವರ್ಷಗಳಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಭದ್ರವಾಗಿ ನೆಲೆಯೂರಿದ್ದು ರಾಜ್ಯಾದ್ಯಂತ ಬೃಹತ್ ಪ್ರಮಾಣದಲ್ಲಿ ಒತ್ತುವರಿ ನಡೆದಿದೆ. ಪರಿಣಾಮ ನದಿ ತೀರದ ಪ್ರದೇಶಗಳು ಹಾನಿಗೀಡಾಗಿವೆ ಎಂದು ಆರೋಪಿಸಿದ್ದಾರೆ.
ಜಮ್ಮು-ಕಾಶ್ಮೀರದ ಸಾರ್ವಜನಿಕ ಆಸ್ತಿಗಳನ್ನು ಹಾಗೂ ಅಲ್ಲಿನ ಖಾಸಗಿ ಸ್ವತ್ತುಗಳನ್ನು ಉಗ್ರಗಾಮಿಗಳು ತಮ್ಮದೆಂದೇ ಭಾವಿಸಿದ್ದಾರೆ. ಇಷ್ಟು ಸಾಲದೆಂಬಂತೆ, ನದಿ ಪಾತ್ರದ ಪ್ರದೇಶಗಳೂ ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ಮಾಡಿಕೊಂಡ ಜಾಗದಲ್ಲಿ ಮಾಲ್ ಹಾಗೂ ಬೃಹತ್ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇವೆಲ್ಲದರ ಪರಿಣಾಮ ಜೀಲಂ ಸೇರಿದಂತೆ ಜಮ್ಮು-ಕಾಶ್ಮೀರದಲ್ಲಿರುವ ಅನೇಕ ನದಿಗಳು ನಾಶವಾಗಿದ್ದು ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದಲ್ಲಿ ಇತ್ತೀಚೆಗಷ್ಟೇ ಉಂಟಾದ ಪ್ರವಾಹ ಸ್ಥಿತಿ ಪ್ರಕೃತಿ ನಮಗೆಲ್ಲರಿಗೂ ನೀಡಿರುವ ಎಚ್ಚರಿಕೆ, ಜಮ್ಮು-ಕಾಶ್ಮೀರದಲ್ಲಿ ನಡೆದಿರುವ ತಪ್ಪುಗಳನ್ನು ಸರಿಪಡಿಸಲು ಇದು ಸರಿಯಾದ ಸಮಯ ಎಂದು ಸಿಂಗ್ ಹೇಳಿದ್ದಾರೆ.