ಬೆಂಗಳೂರು : ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಪ್ರಭಾವಿಗಳಿರಲಿ, ಬಿಲ್ಡರ್ಸ್ಗಳಿರಲಿ, ಯಾರೇ ಇರಲಿ ಒತ್ತುವರಿ ತೆರವುಮಾಡಿ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಒತ್ತುವರಿ ತೆರವು ಮಾಡದಿದ್ದರೆ ಮುಂದೊಂದು ದಿನ ಚೆನ್ನೈನ ಪರಿಸ್ಥಿತಿ ನಮಗೂ ಬಂದೊದಗುತ್ತದೆ. ಆಗ ತೊಂದರೆ ಅನುಭವಿಸುವವರೂ ಸಾರ್ವಜನಿಕರೇ. ರಾಜಕಾಲುವೆ ಒತ್ತುವರಿ ತೆರವು ಕಾರ್ಯವನ್ನು ಮುಂದುವರಿಸಲಾಗುವುದು. ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ.
ಒತ್ತುವರಿ ತೆರವಿನಿಂದ ಕೆಲವರಿಗೆ ತೊಂದರೆ ಆಗಿರಬಹುದು. ಒಳ್ಳೆಯ ಕೆಲಸ ಮಾಡುವಾಗ ಕೆಲವರಿಗೆ ತೊಂದರೆಯಾಗುವುದು ಸಹಜ ಎಂದ ಅವರು, ಕಾಲುವೆ ಮೇಲೆ ಮನೆ ಕಟ್ಟಿಕೊಂಡಿದ್ದು ಜನರ ತಪ್ಪಲ್ಲವೆ ಎಂದು ಸಿಎಂ ಪ್ರಶ್ನಿಸಿದರು.
ಮಳೆ ಬಂದು ಜನವಸತಿ ಪ್ರದೇಶಗಳಿಗೆ, ಮನೆಗಳಿಗೆ, ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿದರೆ ಸರ್ಕಾರವನ್ನು ದೂಷಣೆ ಮಾಡುತ್ತೀರ. ತೆರವು ಮಾಡಲು ಹೋದರೆ ಮತ್ತೆ ನಮ್ಮನ್ನೇ ಕೇಳುತ್ತೀರ, ತೆರವು ಮಾಡದೆ ಇದ್ದರೂ ನಮ್ಮನ್ನೇ ಪ್ರಶ್ನೆ ಮಾಡುತ್ತೀರ ಎಂದು ಹೇಳಿದ್ದಾರೆ.
ಪ್ರಭಾವಿಗಳ ಕಟ್ಟಡಗಳು ಇರುವ ಕಡೆಗಳಲ್ಲಿ ರಾಜಕಾಲುವೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆಧಾರ ಇದ್ದರೆ ಆರೋಪ ಮಾಡಬೇಕು. ಯಾರೇ ತಪ್ಪು ಮಾಡಿದ್ದರೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.