ಶ್ರೀನಗರ : ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಭಾರತೀಯ ಸೇನಾ ಶಿಬಿಗಳ ಮೇಲೆ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದೆ.
ಪೂಂಚ್ ಜಿಲ್ಲೆಯ ಕೆರ್ನಿ ಸೆಕ್ಟರ್ ಹಾಗೂ 4 ಭಾರತೀಯ ಸೇನಾ ಶಿಬಿರಗಳ ಮೇಲೆ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.
ಕಳೆದ 41 ಗಂಟೆಗಳ ಬಳಿಕ ಗಡಿಯಲ್ಲಿ ಮತ್ತೆ ಪಾಕಿಸ್ತಾನ ಕ್ಯಾತೆ ತೆಗೆದಿದ್ದು, ಭಾರತೀಯ ಯೋಧರು ಕೂಡ ಪ್ರತಿದಾಳಿ ನಡೆಸಿದ್ದಾರೆ.
ಕಳೆದ 9ದಿನಗಳಿಂದ ನಿರಂತರವಾಗಿ ಪಾಕ್ ಸೇನೆ ಶೆಲ್ ದಾಳಿ, ಗುಂಡಿನ ದಾಳಿ ನಡೆಸುತ್ತಿತ್ತು. ಆದರೆ ಭಾರತ ನಡೆಸಿದ ಪ್ರತಿದಾಳಿಯಿಂದಾಗಿ ಅ.9ರ ರಾತ್ರಿಯಿಂದ ಪಾಕ್ ಗುಂಡಿನ ದಾಳಿ ನಿಲ್ಲಿಸಿತ್ತು.
ಪಾಕಿಸ್ತಾನ ಈಗ ತಕ್ಕ ಪಾಠ ಕಲಿತಿದೆ. ಮತ್ತೊಮ್ಮೆ ಇಂತಹ ಕೆಲಸ ಮಾಡುವ ಧೈರ್ಯ ಮಾಡಲಾರದು, ನಮ್ಮ ಸೈನಿಕರು ಆ ದೇಶದ ಬಾಯಿ ಮುಚ್ಚಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು. ಇದರ ಬೆನ್ನಲ್ಲೆ ಪಾಕ್ ಪ್ರಧಾನಿ ನವಾಜ್ ಷರೀಫ್, ಶಾಂತಿಸ್ಥಾಪಿಸಬೇಕೆಂಬ ಪಾಕಿಸ್ತಾನದ ಬಯಕೆಯನ್ನು ಭಾರತ ತಪ್ಪಾಗಿ ತಿಳಿಯಬಾರದು ಎಂಬ ಹೇಳಿಕೆ ನೀಡಿದ್ದರು.
ಆದರೀಗ ಭಾರತದ ಗಡಿಯಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡುವ ಮೂಲಕ ಗುಂಡಿನ ದಾಳಿ ನಡೆಸಿದೆ.